Monday 1 November 2010

ಬಾರ್ಬಿಯಾಟವಯ್ಯಾ ಇದು ಬಾರ್ಬಿಯಾಟವಯ್ಯಾ ...


ಜಗತ್ತಿನ ಎಲ್ಲ ಮಕ್ಕಳೂ ಒಂದೇ ರೀತಿಯ ಬೊಂಬೆಗಳನ್ನು ಕೊಳ್ಳುತ್ತಿದ್ದಾರೆ. ನಿಮ್ಮ ಊರಿನ ಅಕ್ಕಪಕ್ಕ ತಯಾರಿಸುವ ಬೊಂಬೆಗಳು ನಿಮ್ಮೂರಿನ ಅಂಗಡಿಗಳಲ್ಲೇ ಸಿಗುತ್ತಿಲ್ಲ. ಎಲ್ಲೆಲ್ಲೂ ಬಾರ್ಬಿ .. ಬಾರ್ಬಿ ..ಬಾರ್ಬಿ!

ಏಕೆ ಹೀಗೆ? ಏಕೆಂದರೆ ಬಾರ್ಬಿ  `ಫ್ಯಾಷನ್' ಬೊಂಬೆ! ಮಕ್ಕಳಿಗೂ ಫ್ಯಾಷನ್ ಹುಚ್ಚು!

ಇಂದು ಬಾರ್ಬಿ ಪ್ರಪಂಚದ ಅತ್ಯಂತ ಪ್ರಸಿದ್ಧ ಫ್ಯಾಷನ್ ಬೊಂಬೆ. ಪ್ರಪಂಚದಲ್ಲೇ ಅತಿ ಹೆಚ್ಚು ಮಾರಾಟವಾಗುವ ಹೆಣ್ಣು ಬೊಂಬೆ. ವಿವಿಧ ದೇಶಗಳ ಹುಡುಗಿಯರ ಚರ್ಮದ ಬಣ್ಣ, ಎತ್ತರ ಹಾಗೂ ಆಯಾ ದೇಶಗಳ ವಿವಿಧ ವಸ್ತ್ರ, ಅಲಂಕಾರಗಳಲ್ಲಿ ಕಂಗೊಳಿಸುವ ಸುಂದರ ಬಾರ್ಬಿ ಬೊಂಬೆಗಳು ಸಿಗುತ್ತವೆ. ಅವುಗಳಿಗೆ ಹಾಕಲು ವಿವಿಧ ವಸ್ತ್ರಗಳೂ ಅಲಂಕಾರ ಸಾಮಗ್ರಿಗಳೂ ಸಿಗುತ್ತವೆ. ಹೆಣ್ಣು ಮಕ್ಕಳ ಅಚ್ಚುಮೆಚ್ಚಿನ ಆಟದ ಬೊಂಬೆ ಇದು.

ನಿಮಗೆ ಗೊತ್ತೆ? ಪಶ್ಚಿಮದ ದೇಶಗಳಲ್ಲಿ ಬಾರ್ಬಿ ಬೊಂಬೆಗಳನ್ನು ಕೊಂಡು ಸಂಗ್ರಹಿಸುವ ಹುಚ್ಚು ಮಕ್ಕಳಿಗಿಂತಲೂ ದೊಡ್ಡ ಮಹಿಳೆಯರಲ್ಲೇ ತೀವ್ರವಾಗಿದೆ. ಈ ಟ್ರೆಂಡ್ ಹುಟ್ಟುಹಾಕಿದ ಬಾರ್ಬಿ ತಯಾರಕ ಕಂಪೆನಿಯಾದ ಮ್ಯಾಟೆಲ್ ಇನ್ಕಾರ್ಪೋರೇಷನ್ ಚೆನ್ನಾಗಿ ಲಾಭ ಗಳಿಸಿ ಖುಷಿ ಪಡುತ್ತಿದೆ!

ಜಗತ್ತಿನಲ್ಲಿ ಸುಮಾರು ಒಂದು ಲಕ್ಷ ಜನರು ಬಾರ್ಬಿ ಬೊಂಬೆಗಳನ್ನು ಅತಿಯಾಗಿ ಸಂಗ್ರಹಿಸಿದ್ದಾರಂತೆ! ಅವರ ಮನೆಗಳು ಬಾರ್ಬಿ ಮ್ಯೂಸಿಯಂ ರೀತಿ ಇರಬಹುದು! ಈ 1 ಲಕ್ಷ ಜನರ ಪೈಕಿ ಶೇ. 90ರಷ್ಟು (90,000 ಮಂದಿ) ಮಂದಿ ಹೆಂಗಸರು. ಅವರು ಮಕ್ಕಳಲ್ಲ! ಈ ಹೆಂಗಸರ ಸರಾಸರಿ ವಯಸ್ಸು 40 ವರ್ಷ! ಇವರ ಪೈಕಿ ಶೇ. 45ರಷ್ಟು, ಅಂದರೆ ಸುಮಾರು 39,000 ಹೆಂಗಸರು ಬಾರ್ಬಿ ಕೊಳ್ಳಲು ಪ್ರತಿವರ್ಷ 1000 ಡಾಲರ್ (ಸುಮಾರು 50,000 ರೂಪಾಯಿ) ಖರ್ಚು ಮಾಡುತ್ತಿದ್ದಾರೆ ಎಂದು ಮ್ಯಾಟೆಲ್ ಕಂಪೆನಿ ಅಂದಾಜು ಮಾಡಿದೆ.

ನಿಮ್ಮ ಕೈಯಲ್ಲಿರುವ ಮುದ್ದಾದ ಬಾರ್ಬಿಗೆ ಈಗ 48 ವರ್ಷ! ಅಂದರೆ ಅದರ ತಯಾರಿಕೆ ಶುರುವಾದದ್ದು 1959ರಲ್ಲಿ. ರೂಥ್ ಹ್ಯಾಂಡ್ಲರ್ (1916-2002) ಎನ್ನುವ ಅಮೆರಿಕನ್ ವ್ಯಾಪಾರಸ್ಥ ಮಹಿಳೆ ಅದರ ಸೃಷ್ಟಿಕರ್ತೆ. ಆಕೆಯ ಮಗಳ ಹೆಸರು ಬಾರ್ಬರಾ. ರೂಥ್ ತನ್ನ ಮಗಳ ಹೆಸರನ್ನೇ ತಾನು ತಯಾರಿಸಿದ ಬೊಂಬೆಗೆ ಇಟ್ಟಿರುವುದು!

ಬಾರ್ಬಿ ಬೊಂಬೆಯ ಸೃಷ್ಟಿಕರ್ತೆ ರೂಥ್ ಎಂದರೂ ಬಾರ್ಬಿಯ ವಿನ್ಯಾಸವನ್ನು ಆಕೆ ರೂಪಿಸಲಿಲ್ಲ. ಇನ್ನೊಂದು ಪ್ರಸಿದ್ಧ ಜರ್ಮನ್ ಬೊಂಬೆ ಇತ್ತು. `ಬೈಲ್ಡ್ ಲಿಲ್ಲಿ' ಎಂದು ಅದರ ಹೆಸರು ಅದರ ವಿನ್ಯಾಸವನ್ನೇ ಬಾರ್ಬಿ ತಯಾರಕರು ಅನುಕರಿಸಿದರು.


ಬಾರ್ಬಿ ಮಕ್ಕಳ ಪ್ರತಿಕೃತಿ ಅಲ್ಲ. ತರುಣಿಯರ ಶರೀರ ರಚನೆ ಹೊಂದಿರುವ ಬೊಂಬೆ ಅದು. ಈ ರೀತಿಯ ಫ್ಯಾಷನ್ ಬೊಂಬೆ ತಯಾರಿಸುವ ಟ್ರೆಂಡ್ ಸರಿಯಲ್ಲ ಎಂಬ ಟೀಕೆಗಳೂ ಇವೆ.

1956ರಲ್ಲಿ ತನ್ನ ಮಕ್ಕಳಾದ ಬಾರ್ಬರಾ ಹಾಗೂ ಕೆನೆತ್ರನ್ನು ಕರೆದುಕೊಂಡು ರೂಥ್ ಹ್ಯಾಂಡ್ಲರ್ ಸ್ವಿಟ್ಜರ್ಲ್ಯಾಂಡ್ ಪ್ರವಾಸಕ್ಕೆ ಹೋಗಿದ್ದಳು. ಅಲ್ಲಿ ಬೈಲ್ಡ್ ಲಿಲ್ಲಿ ಬೊಂಬೆಗಳನ್ನು ನೋಡಿದಳು. ಮೂರು ಬೊಂಬೆಗಳನ್ನು ಕೊಂಡಳು. ಅಮೆರಿಕಕ್ಕೆ ಮರಳಿದ ನಂತರ ಲಿಲ್ಲಿಯ ವಿನ್ಯಾಸವನ್ನು ಸ್ವಲ್ಪ ಬದಲಿಸಿ ಹೊಸ ಬೊಂಬೆಗಳನ್ನು ತಯಾರಿಸಿದಳು. ಅದಕ್ಕೆ `ಬಾರ್ಬಿ' ಎಂದು ತನ್ನ ಮಗಳ ಹೆಸರನ್ನೇ ಇಟ್ಟಳು. 1959ರಲ್ಲಿ ನ್ಯೂಯಾರ್ಕ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಬೊಂಬೆಗಳ ಮೇಳದಲ್ಲಿ ಬಾರ್ಬಿಯನ್ನು ಪ್ರದರ್ಶಿಸಿದಳು. ಕೊನೆಗೆ 1964ರಲ್ಲಿ ಬೈಲ್ಡ್ ಲಿಲ್ಲಿ ಕಂಪೆನಿಯನ್ನೇ ಮ್ಯಾಟೆಲ್ ಕಂಪೆನಿ ಕೊಂಡುಕೊಂಡಿತು. ಲಿಲ್ಲಿ ಬೊಂಬೆಗಳ ಉತ್ಪಾದನೆ ನಿಲ್ಲಿಸಿತು. ಬಾರ್ಬಿ ಉತ್ಪಾದನೆಯನ್ನು ಬೆಳೆಸಿತು.

 ಮೂಲತಃ ಲಿಲ್ಲಿ ಬೊಂಬೆ ಸಹ ಮಕ್ಕಳಿಗಾಗಿ ತಯಾರಿಸಲಾಗುತ್ತಿದ್ದ ಬೊಂಬೆ ಅಲ್ಲ. ಪಶ್ಚಿಮದ ದೇಶಗಳಲ್ಲಿ ತರುಣಿಯರಿಗೇ ಬೊಂಬೆ ಇಟ್ಟುಕೊಳ್ಳುವ ಗೀಳು ಜಾಸ್ತಿ! ಆದರೂ ಲಿಲ್ಲಿಯನ್ನು ಮಕ್ಕಳು ಬಹಳ ಇಷ್ಟಪಟ್ಟರು. ಈಗ ಬಾರ್ಬಿಯನ್ನೂ ಇಷ್ಟಪಡುತ್ತಿದ್ದಾರೆ.

ಬಾರ್ಬಿ ವಿನ್ಯಾಸ ಒರಿಜಿನಲ್ ಅಲ್ಲ; ಅನುಕರಣೆ ಮಾಡಿದ್ದು. ಹಾಗೂ ಈ ಬೊಂಬೆ ಮೂಲಕ ಪ್ರಚಾರ ಮಾಡುತ್ತಿರುವ ಜೀವನಶೈಲಿ ಸರಿಯಲ್ಲ; ಮಕ್ಕಳು ತಪ್ಪು ಮಾರ್ಗದರ್ಶನ ಪಡೆಯುತ್ತವೆ ಎಂಬ ಆಪಾದನೆಗಳು ಮ್ಯಾಟೆಲ್ ಕಂಪೆನಿ ಮೇಲಿದೆ. ಅನೇಕ ಕೋರ್ಟ್ ಕೇಸುಗಳನ್ನೂ ಕಂಪೆನಿ ಎದುರಿಸಿದೆ.

ಆದರೆ ಬಾರ್ಬಿ ಟ್ರೆಂಡ್ ಮುಂದುವರಿದಿದೆ (ಈಚಿನ ವರ್ಷಗಳಲ್ಲಿ `ಬ್ರ್ಯಾಟ್ಜ್' ಎಂಬ ಹೊಸ ಬೊಂಬೆಗಳು ಬಾರ್ಬಿಗೆ ಸ್ಪಧರ್ೆ ನೀಡುತ್ತಿವೆ. ಎಂಜಿಎ ಎಂಟರ್ಟೈನ್ಮೆಂಟ್ ಎಂಬ ಕಂಪೆನಿ ತಯಾರಿಸುತ್ತಿರುವ ಬ್ರ್ಯಾಟ್ಜ್ ಬೊಂಬೆಗಳೂ ಸಹ ಚೆನ್ನಾಗಿ ಮಾರಾಟವಾಗುತ್ತಿವೆ).

ನಾಯಿಗೆ ನಿಜವಾಗಿಯೂ ಎಷ್ಟು ಬುದ್ಧಿ ಇದೆ?

ತಮ್ಮ ನಾಯಿಗೆ ಮನುಷ್ಯರಷ್ಟೇ ಬುದ್ಧಿ ಇದೆ ಎಂದು ಅತಿಯಾದ ನಾಯಿ-ಪ್ರೀತಿ ಇಟ್ಟುಕೊಂಡಿರುವವರು ವಾದಿಸುವುದು ಸಾಮಾನ್ಯ. ಆದರೆ ನಾಯಿಗೆ ನಿಜವಾಗಿಯೂ ಎಷ್ಟು ಬುದ್ಧಿ ಇದೆ? ನಾಯಿಗಳ ಬುದ್ಧಿಶಕ್ತಿಯನ್ನು ವೈಜ್ಞಾನಿಕವಾಗಿ ಅಳೆಯುವ ಕೆಲಸ ಆಗಿದೆಯೆ?

ಈಚೆಗೆ ಈ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ವಿಯೆನ್ನಾ ವಿಶ್ವವಿದ್ಯಾಲಯದ ಸಂಶೋಧಕರು ನಾಯಿಗಳ ಬುದ್ಧಿಶಕ್ತಿ ಕುರಿತು ನಡೆಸಿದ ಅಧ್ಯಯನದ ಪ್ರಕಾರ, ನಾಯಿಗಳಿಗೆ ಸಾಮಾನ್ಯವಾಗಿ 14 ತಿಂಗಳ ಮಾನವ ಶಿಶುಗಳಷ್ಟು ಬುದ್ಧಿ ಇರುತ್ತದೆ ಎಂಬ ಅಂಶ ತಿಳಿದುಬಂದಿದೆ!

`ಗಿನ್ನೆಸ್' ಎಂಬ ಹೆಣ್ಣುನಾಯಿಗೆ ತರಬೇತಿ ನೀಡಿ ಅಧ್ಯಯನಕ್ಕೆ ಬಳಸಿಕೊಳ್ಳಲಾಗಿತ್ತು. ಅದರೊಟ್ಟಿಗೆ ಇತರ ಕೆಲವು ಬೇರೆ ಬೇರೆ ಜಾತಿ ನಾಯಿಗಳನ್ನೂ ಸೇರಿಸಿಕೊಳ್ಳಲಾಗಿತ್ತು.

ಯಾವುದೇ ವಸ್ತುವನ್ನಾದರೂ ನಾಯಿಗಳು  ಸಾಮಾನ್ಯವಾಗಿ ತಮ್ಮ ಮೂತಿಯಿಂದ ತಳ್ಳುವುದು ಸಹಜ ಕ್ರಿಯೆ. ಮೂತಿಯಿಂದ ತಳ್ಳುವ ಬದಲು ಗಿನ್ನೆಸ್ ತನ್ನ ಕಾಲುಗುರುಗಳಿಂದ ವಸ್ತುವೊಂದನ್ನು ತಳ್ಳುವಂತೆ ಸಂಶೋಧಕರು ಮಾಡಿದರು. ಅದನ್ನು ನಾಯಿಗಳ ಗುಂಪೊಂದು ವೀಕ್ಷಿಸುವಂತೆ ಅವಕಾಶ ಕಲ್ಪಿಸಲಾಗಿತ್ತು.

ಗಿನ್ನೆಸ್ ನಡವಳಿಕೆ ನೋಡದ ನಾಯಿಗಳ ಇನ್ನೊಂದು ಗುಂಪು ತಮ್ಮ ಸರದಿ ಬಂದಾಗ ವಸ್ತುವನ್ನು ಸಹಜವಾಗಿ ಮೂತಿಯಿಂದಲೇ ತಳ್ಳಿದವು. ಆದರೆ ಗಿನ್ನೆಸ್ ವಿಧಾನಕ್ಕೆ ಸಾಕ್ಷಿಗಳಾಗಿದ್ದ ನಾಯಿಗಳು ಮಾತ್ರ ತುಂಬಾ ಶ್ರಮಪಟ್ಟು ತಾವೂ ಕಾಲುಗುರುಗಳಿಂದಲೇ ವಸ್ತುವನ್ನು ತಳ್ಳಿದವು!

ಯಾವುದನ್ನು ಅನುಕರಣೆ ಮಾಡಬೇಕು, ಯಾವುದನ್ನು ಮಾಡಬಾರದು ಎಂಬ ವಿವೇಚನಾ ಶಕ್ತಿ ನಾಯಿಗಳಿಗೆ ಇರುವುದಿಲ್ಲ ಎಂಬ ಅಂಶ ಈ ಪ್ರಯೋಗದಿಂದ ತಿಳಿಯಿತು.

ಈ ಸಂಶೋಧಕರು ನಾಯಿಗಳ ಬೌದ್ಧಿಕಮಟ್ಟ 14 ತಿಂಗಳ ಮಾನವ ಶಿಶುಗಳ ಬೌದ್ಧಿಕಮಟ್ಟಕ್ಕೆ ಸಮವಾಗಿರುತ್ತದೆ ಎಂದಿದ್ದಾರೆ.

ಆದರೆ ಇದನ್ನು ಎಲ್ಲ ಸಂಶೋಧಕರೂ ಒಪ್ಪುವುದಿಲ್ಲ. 14 ತಿಂಗಳ ಮಕ್ಕಳ ಬುದ್ಧಿ ಇನ್ನೂ ಚುರುಕಾಗಿರುತ್ತದೆ ಎಂದು ಪ್ರತ್ಯೇಕ ಪರೀಕ್ಷೆಯೊಂದು ತೋರಿಸಿಕೊಟ್ಟಿದೆ.

ಈ ಪರೀಕ್ಷೆಯನ್ನು ಹೀಗೆ ನಡೆಸಲಾಯಿತು: ಟ್ರೇ ಹಿಡಿದುಕೊಂಡಿದ್ದ ತಾಯಿಯೊಬ್ಬಳು ತನ್ನ ತಲೆಯಿಂದ ಸ್ವಿಚ್ ಹಾಕಿದಳು. ಅದನ್ನು ಆಕೆಯ 14 ತಿಂಗಳ ಮಕ್ಕಳಿಗೆ ತೋರಿಸಲಾಯಿತು. ತಮ್ಮ ಸರದಿ ಬಂದಾಗ ಈ ಶಿಶುಗಳು ತಮ್ಮ ಕೈಗಳಿಂದಲೇ ಸ್ವಿಚ್ ಹಾಕಿದವೇ ಹೊರತು ತಲೆಯಿಂದಲ್ಲ! ತಮ್ಮ ತಾಯಿಯ ಕೈಗಳಲ್ಲಿ ಏನೋ ವಸ್ತುವಿತ್ತು. ಹೀಗಾಗಿ ಆಕೆ ಕೈಗಳಿಂದ ಸ್ವಿಚ್ ಹಾಕುವುದು ಸಾಧ್ಯವಾಗಲಿಲ್ಲ ಎಂಬುದನ್ನು ಅವು ಗ್ರಹಿಸಿದ್ದವು! ನಾಯಿಗಳಂತೆ ಸುಮ್ಮನೆ ಅನುಕರಣೆ ಮಾಡಲಿಲ್ಲ.

ಅಂದರೆ ನಾಯಿಗಳಿಗೆ 14 ತಿಂಗಳ ಶಿಶುಗಳಷ್ಟೂ ವಿವೇಚನಾಶಕ್ತಿ ಇಲ್ಲ!

ಕೃಷ್ಣದೇವರಾಯನ ಕಾಲದಲ್ಲಿ ಕನ್ನಡಕ ಇತ್ತು!

ಕನ್ನಡಕ ಹಾಕಿಕೊಳ್ಳುವುದು, ಜೇಬಿನಲ್ಲಿ ಗರಿಗರಿ ನೋಟುಗಳನ್ನು ಇಟ್ಟುಕೊಂಡು ತಿಂಡಿ ತಿನ್ನಲು ರೆಸ್ಟುರಾಗೆ ಹೋಗುವುದು ಇವೆಲ್ಲ ನಮಗೆ ಈಚೆಗೆ ಸಿಕ್ಕಿರುವ ಅನುಕೂಲತೆಗಳು, ಇವೆಲ್ಲ ಆಧುನಿಕ ನಾಗರಿಕತೆಯ ಕೊಡುಗೆಗಳು, ಅಲ್ಲವೆ?

   ಅಲ್ಲ!

ಅವು ಈಚಿನ ಸೌಲಭ್ಯಗಳು ಎಂಬುದು ಹೆಚ್ಚಿನ ಜನರ ಭಾವನೆ. ಆದರೆ ಅವೆಲ್ಲ ಪ್ರಾಚೀನ ಕಾಲದಿಂದಲೂ ಇವೆ!

   ನಾವು ಸಾಮಾನ್ಯವಾಗಿ ಎಷ್ಟೋ ಅನುಕೂಲತೆಗಳನ್ನು ಆಧುನಿಕ ಕಾಲದ ಕೊಡುಗೆ ಎಂದುಕೊಳುತ್ತೇವೆ. ಆದರೆ ಅವುಗಳ ಹಿಂದೆ ದೀರ್ಘ ಇತಿಹಾಸವೇ ಇರುತ್ತದೆ. ಅಂತಹ ಕೆಲವು ಸ್ವಾರಸ್ಯಗಳನ್ನು ನಿಮಗೆ ಹೇಳುತ್ತೇನೆ.

   ಉದಾಹರಣೆಗೆ ಪ್ಲ್ಯಾಸ್ಟಿಕ್ ಸರ್ಜರಿ. ಅದು ಈ ಕಾಲದ ವಿಶೇಷವಲ್ಲ. 2500 ವರ್ಷಗಳ ಹಿಂದೆಯೇ ಪ್ರಾಚೀನ ಭಾರತದ ಮಹಾನ್ ವೈದ್ಯ ಸುಶ್ರುತ ಪ್ಲ್ಯಾಸ್ಟಿಕ್ ಸರ್ಜರಿ ನಡೆಸುತ್ತಿದ್ದ! ಕಿವಿ, ಮೂಗು ಕೋಯ್ದುಹೋದವರಿಗೆ ಪುನಃ ಅವುಗಳನ್ನು ಜೋಡಿಸುತ್ತಿದ್ದ! ಕಣ್ಣಿನ ಶಸ್ತ್ರಚಿಕಿತ್ಸೆ ಮಾಡಿ ಪೊರೆ ತೆಗೆಯುತ್ತಿದ್ದ!

    ಈಗ ರೆಸ್ಟುರಾ ವಿಷಯ ನೋಡೋಣ. ನೂರಾರು ವರ್ಷಗಳ ಹಿಂದೆ ಹೊಟೇಲ್ಗಳು ಎಲ್ಲಿದ್ದವು ಎನ್ನಬಹುದು ನೀವು. ಈಗ ನಮಗೆ ತಿಳಿದಿರುವ ಹಾಗೆ ಪ್ರಪಂಚದ ಮೊದಲ ರೆಸ್ಟುರಾ ಆರಂಭವಾಗಿದ್ದು ಚೀನಾದ ಕಾಯ್ಫೆಂಗ್ನಲ್ಲಿ. ಅದೂ ಕ್ರಿ.ಶ. 1153ರಲ್ಲಿ! `ಮಾ ಯೂ ಚಿಂಗ್ಸ್ ಚಿಕನ್ ಬಕೆಟ್ ಹೌಸ್' ಎನ್ನುವ ಹೆಸರಿನಲ್ಲಿ ಅದು ಈಗಲೂ ಕಾರ್ಯ ನಿರ್ವಹಿಸುತ್ತಿದೆ!!

   ಸರಿ, ಗರಿಗರಿ ಕಾಗದದ ನೋಟು ಯಾವಾಗ ಬಂತು?

   ಹಣದ ಪರಿಕಲ್ಪನೆ ಮನುಷ್ಯನ ನಾಗರಿಕತೆಯಷ್ಟೇ ಹಳೆಯದು. ಚಿನ್ನವನ್ನು ಹಣದ (ಕರೆನ್ಸಿ) ರೀತಿ ವ್ಯವಹಾರಕ್ಕೆ ಬಳಸುವ ಬಗ್ಗೆ ವೇದಗಳಲ್ಲಿ ಉಲ್ಲೇಖವಿದೆ. ಹಸುಗಳನ್ನು ಕೊಟ್ಟು ಪದಾರ್ಥ ಕೊಳ್ಳುವ ಪದ್ಧತಿ ಬಗ್ಗೆಯೂ ಉಲ್ಲೇಖಗಳಿವೆ. ಲೋಹದ ಚೂರುಗಳನ್ನು ನಾಣ್ಯದ ರೀತಿ ಬಳಸುವ ರೂಢಿ ಕ್ರಿ.ಪೂ 5000ದಲ್ಲಿಯೇ ಇತ್ತು. ಕ್ರಿ.ಪೂ 700ರ ಕಾಲದ ಲಿಡಿಯನ್ ನಾಣ್ಯಗಳು ಸಿಕ್ಕಿವೆ. ಭಾರತದಲ್ಲಿ ಮಹಾಜನಪದರು ಹೊರಡಿಸಿದ ನಾಣ್ಯಗಳು (ಕ್ರಿ.ಪೂ 600ರ ಕಾಲದವು) ಸಿಕ್ಕಿವೆ. ಅವುಗಳನ್ನು `ಪಣ'ಗಳು, `ಕಾರ್ಷಪಣ'ಗಳು ಎನ್ನಲಾಗುತ್ತಿತ್ತು. ಆದರೆ ಗರಿಗರಿ ನೋಟಿನ ಕಥೆ ಏನು? ಕಾಗದದ ಕರೆನ್ಸಿಯ ಮೂಲವೂ ಸಹ ಚೀನಾ. ಸಾವಿರ ವರ್ಷಗಳಿಗೂ ಹಿಂದೆಯೇ ಅಲ್ಲಿ (ಈಗಿನ ಚೀನಾ ಗಡಿಗಳನ್ನು ಲೆಕ್ಕಕ್ಕೆ ತೆಗೆದುಕೊಳ್ಳಬೇಡಿ) ಕಾಗದದ ಹಣದ ನೋಟುಗಳು ಬಳಕೆಯಲ್ಲಿದ್ದವು. ಕ್ರಿ.ಶ 960ರಲ್ಲಿ ಕಾಗದದ ಹಣ ಚೆನ್ನಾಗಿ ಬಳಕೆಗೆ ಬಂದಿದ್ದ ಬಗ್ಗೆ ದಾಖಲೆ ಲಭ್ಯವಿದೆ.

   ಸರಿ, ಕನ್ನಡಕದ ಜಾತಕ ಏನು? ನಮ್ಮ ಕೃಷ್ಣದೇವರಾಯನ ಕಾಲದಲ್ಲಿ ಕನ್ನಡಕ ಇತ್ತೆ? ಹೋಯ್ಸಳರ ಕಾಲದಲ್ಲಿ ಇತ್ತೆ?

   ಇತ್ತು! ಆದರೆ ಇಲ್ಲಲ್ಲ. 9ನೇ ಶತಮಾನದಲ್ಲಿ ಸ್ಪೇನ್ನಲ್ಲಿ ಗಾಜಿನಿಂದ ತಯಾರಿಸಿದ ಓದುವ ಕಲ್ಲುಗಳಿದ್ದವು! ಅವುಗಳನ್ನು ತಯಾರಿಸಿ ಮಾರಲಾಗುತ್ತಿತ್ತು. ಜನರು ಈ `ರೀಡಿಂಗ್ ಗ್ಲಾಸ್'ಗಳನ್ನು ಕೊಳ್ಳುತ್ತಿದ್ದರು. ಚೀನಾದಲ್ಲಿ 13ನೇ ಶತಮಾನದಲ್ಲಿ ಕನ್ನಡಕಗಳು ಬಳಸಲ್ಪಡುತ್ತಿದ್ದವು.

   1289ರ ಒಂದು ಇಟಾಲಿಯನ್ ಗ್ರಂಥದಲ್ಲಿ ಕನ್ನಡಕದ ಬಗ್ಗೆ ವಿವರಣೆ ಇದೆ. ಪೀಸಾ ಅಥವಾ ವೆನಿಸ್ನಲ್ಲಿ 1285-89ರ ಸುಮಾರಿನಲ್ಲಿ ಕನ್ನಡಕ ತಯಾರಿಕೆ ಆರಂಭವಾಯಿತು ಎನ್ನುತ್ತಾರೆ ತಜ್ಞರು. ಇಲ್ಲಿ ಕೊಟ್ಟಿರುವ ಕನ್ನಡಕ ಧರಿಸಿರುವ ಮಹಿಳೆಯ ಚಿತ್ರ ಕ್ರಿ. ಶ. 1352ಕ್ಕೆ ಸೇರಿದ್ದು!

   ಹಾಗಾದರೆ ಗಾಜೂ ಸಹ ಹಳೆಯದೇ ಇರಬೇಕು.

   ಹೌದು. ನೈಸಗರ್ಿಕವಾಗಿ ತಯಾರಾದ ಗಾಜು (ಓಬ್ಸಿಡಿಯನ್) ಶಿಲಾಯುಗದ ಜನರಿಗೇ ಗೊತ್ತಿತ್ತು. ಕ್ರಿ. ಪೂ. 3000ದಲ್ಲಿ ಫೀನೀಶಿಯನ್ನರು ಗಾಜು ತಯಾರಿಸುತ್ತಿದ್ದರು ಎನ್ನಲಾಗಿದೆ. ಮೆಸಪೊಟೇಮಿಯಾ (ಈಗಿನ ಇರಾಕ್) ಪ್ರದೇಶದಲ್ಲಿ ಕ್ರಿ. ಪೂ. 2500ರಷ್ಟು ಹಿಂದಿ ಗಾಜಿನ ಸಾಮಗ್ರಿಗಳು ಸಿಕ್ಕಿವೆ. ಪ್ರಾಚೀನ ಭಾರತದ ಗಾಜಿನ ಮಣಿಗಳು ಸಹ ಸಿಕ್ಕಿವೆ.

Wednesday 8 September 2010

ಗಣೇಶ ಚೌತಿ ಮತ್ತು ಸ್ವಾತಂತ್ರ್ಯ ಹೋರಾಟ


ಗಣೇಶ ಚೌತಿ ಹಿಂದುಗಳ ಪವಿತ್ರ ಹಬ್ಬ. ಶ್ರೀ ವರಸಿದ್ಧಿ ವಿನಾಯಕ ವ್ರತವನ್ನು ಆಚರಿಸುವ ದಿನ. ಭಾದ್ರಪದ ಮಾಸದ ಶುಕ್ಲ ಚತುಥರ್ಿಯು ಶ್ರೀ ಗಣೇಶನ ಜನ್ಮ (ಅವತಾರ) ದಿವಸ ಎನ್ನಲಾಗುತ್ತದೆ. ಹೀಗಾಗಿ ಇದು ಧಾಮರ್ಿಕ ಮಹತ್ವವಿರುವ ವಿಶೇಷ ಪೂಜಾ ಸಂದರ್ಭ.

ಅದೆಲ್ಲ ಗೊತ್ತಿರುವ ವಿಷಯವೇ.

ಆದರೆ, ರಾಷ್ಟ್ರದ ಸ್ವಾತಂತ್ರ್ಯ ಹೋರಾಟದ ಹಿಂದೆಯೂ ಈ ಹಬ್ಬ ಪ್ರಮುಖ ಪಾತ್ರವನ್ನು ಹೊಂದಿತ್ತು ಎಂಬ ವಿಷಯ ನಿಮಗೆ ಗೊತ್ತೆ?

1893ಕ್ಕೂ ಹಿಂದೆ ಗಣೇಶ ಚೌತಿಯನ್ನು ಮನೆಗಳಲ್ಲಿ ಆಚರಿಸುತ್ತಿದ್ದರು. ಶ್ರೀ ವರಸಿದ್ಧಿ ವಿನಾಯಕನ ವ್ರತ-ಪೂಜೆಗಳನ್ನು ನಡೆಸುತ್ತಿದ್ದರು. ದೇವಸ್ಥಾನಗಳಲ್ಲಿ ವಿಶೇಷ ಪೂಜೆಗಳು ಜರುಗುತ್ತಿದ್ದವು. ಆದರೆ ಸಾರ್ವಜನಿಕವಾಗಿ ಗಣೇಶನನ್ನು ಕೂರಿಸಿ, ಸಾವಿರಾರು ಜನರು ಒಟ್ಟಿಗೇ ಸೇರಿ 10 ದಿನಗಳ ಕಾಲ ಪೂಜಿಸಿ, ನಂತರ ಲಕ್ಷಾಂತರ ಜನರು ಒಟ್ಟಾಗಿ ಗಣೇಶನ ಮೂತರ್ಿಗಳನ್ನು ಹಳ್ಳ, ನದಿ, ಸಮುದ್ರಗಳಲ್ಲಿ ವಿಸಜರ್ಿಸುವ ಕಾರ್ಯಕ್ರಮಗಳು ಇರಲಿಲ್ಲ. ಅದೆಲ್ಲ ಆರಂಭವಾಗಿದ್ದು 1893ರಲ್ಲಿ.

1893ರಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿಯಲ್ಲಿದ್ದ ಲೋಕಮಾನ್ಯ ಬಾಲ ಗಂಗಾಧರ ತಿಲಕರು ಗಣೇಶ ಚತುಥರ್ಿಯ ಆಚರಣೆಗೆ ಒಂದು ಹೊಸ ರೂಪವನ್ನು ಕೊಟ್ಟರು. ಈ ಹಬ್ಬವನ್ನು ಸುಸಂಘಟಿತವಾದ ಸಾರ್ವಜನಿಕ ಕಾರ್ಯಕ್ರಮವನ್ನಾಗಿ ಪರಿವತರ್ಿಸಿದರು. ಮನೆಗಳ ಒಳಗಿನ ಹಬ್ಬವನ್ನು ರಾಷ್ಟ್ರೀಯ ಮಹೋತ್ಸವವನ್ನಾಗಿಸಿದರು.


ಅಲ್ಲಿಂದ ಮುಂದಕ್ಕೆ ಪ್ರತಿವರ್ಷ ಇದೇ ಕ್ರಮ ಮುಂದುವರಿಯಿತು. `ದೇವರು ಸರ್ವರಿಗೂ ಸೇರಿದವನು' ಎಂಬ ತಿಲಕರ ಕರೆಗೆ ಓಗೊಟ್ಟು ಎಲ್ಲ ಜಾತಿ, ಪಂಥಗಳ ಜನರೂ ಒಂದಾದರು. ಒಟ್ಟಿಗೇ ಸೇರಿದರು. ಪೂಜೆ ಮಾಡಿದರು. ದೇಶಕ್ಕೆ ಒದಗಿಬಂದಿರುವ ದಾಸ್ಯವನ್ನು ತೊಲಗಿಸಲು ಸಂಕಲ್ಪ ಮಾಡತೊಡಗಿದರು. ತಮ್ಮ ತಮ್ಮ ಊರು, ಪ್ರದೇಶಗಳಿಗೂ ಮೀರಿದ ರಾಷ್ಟ್ರೀಯ ದೃಷ್ಟಿಯನ್ನು ಸಾಮಾನ್ಯ ಜನರೂ ಪಡೆಯತೊಡಗಿದರು.

ಭಾರತೀಯ ಜನರು ಒಂದೆಡೆ ಸೇರುವುದನ್ನು ತಡೆಯಲು ಬ್ರಿಟಿಷ್ ಸಕರ್ಾರ ಯತ್ನಿಸುತ್ತಿದ್ದ ಕಾಲ ಅದು. ಆ ಸಮಯದಲ್ಲಿ ಊರೂರುಗಳಿಗೂ ಸಾರ್ವಜನಿಕ ಗಣೇಶೋತ್ಸವ ಪ್ರವೇಶಿಸಿತು. ಹಬ್ಬದ ಸಮಯದಲ್ಲಿ ಸಾರ್ವಜನಿಕವಾಗಿ ಸಂಗೀತ, ನೃತ್ಯ, ನಾಟಕ, ಕವಿಗೋಷ್ಠಿ, ಕಥಾಶ್ರವಣ, ಭಾಷಣ - ಹೀಗೆ ಹಲವಾರು ಕಾರ್ಯಕ್ರಮಗಳು ನಡೆಯುವಂತೆ ತಿಲಕರು ಪ್ರೋತ್ಸಾಹಿಸಿದರು. ವಿವಿಧ ಭಾಷೆ ಹಾಗೂ ಪ್ರಾಂತ್ಯಗಳ, ಆದರೆ ಒಂದೇ ದೇಶದ, ಮಕ್ಕಳನ್ನು ಒಂದಾಗಿ ಬೆಸೆಯಿತು ಗಣೇಶ ಚೌತಿ!

ಹೀಗೆ ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಮೂಲಕ ತಿಲಕರು ಭಾರತದಲ್ಲಿ ಬ್ರಿಟಿಷ್ ಆಳ್ವಿಕೆಗೆ ಕಷ್ಟಕರವಾದ ಪರಿಸ್ಥಿತಿಯನ್ನು ನಿಮರ್ಿಸಿದರು. ಭಾರತೀಯರ ಸಂಸ್ಕೃತಿಯನ್ನು ನಾಶ ಮಾಡಲು ಸಾಧ್ಯವಾದದೇ ಇದ್ದೂದೂ ಬ್ರಿಟಷರ ನಿರ್ಗಮನಕ್ಕೆ ಒಂದು ಕಾರಣ.

ಜನರು ಮಾನಸಿಕವಾಗಿ ಬ್ರಿಟಿಷರೊಡನೆ ಒಂದಾಗದೇ ಇದ್ದುದು, ಅವರ ಮೇಲ್ಮೆಯನ್ನು ಸ್ವೀಕರಿಸದೇ ಇದ್ದುದು, ಅವರ ಆಳ್ವಿಕೆಗೆ ದೊಡ್ಡ ಪೆಟ್ಟು ಕೊಟ್ಟಿತು. ಹೀಗೆ ಸ್ವಾತಂತ್ರ್ಯ ಹೋರಾಟಕ್ಕೆ ಗಣೇಶ ಚತುಥರ್ಿ ಬಹಳ ಸಹಕಾರಿಯಾಯಿತು.

ವಿಶ್ವದ ದೊಡ್ಡ ಸಸ್ತನಿಗಳು


1) ಭೂಮಿಯ ದೈತ್ಯ, ನೀಲಿ ತಿಮಿಂಗಿಲ

ಭೂಮಿಯ ಅತಿ ದೊಡ್ಡ ಪ್ರಾಣಿ ಸಮುದ್ರದಲ್ಲಿದೆ. ಅದೇ ನೀಲಿ ತಿಮಿಂಗಿಲ. ಅದು 33 ಮೀಟರ್ (110 ಅಡಿ) ಉದ್ದ 181 ಮೆಟ್ರಿಕ್ ಟನ್ (1,80,000 ಕೆ.ಜಿ.!) ತೂಕವಿರುವ ಬೃಹತ್ ಸಸ್ತನಿ. ಅಂದರೆ 8-10 ಅಂತಸ್ತಿನ ಭಾರಿ ಕಟ್ಟಡದಷ್ಟು ಗಾತ್ರ!
ನೀಲಿ ತಿಮಿಂಗಿಲದ ತಲೆ ಎಷ್ಟು ದೊಡ್ಡದೆಂದರೆ ಅದರ ನಾಲಿಗೆಯ ಮೇಲೆ 50 ಜನರು ನಿಂತುಕೊಳ್ಳಬಹುದು! ಅದರ ಹೃದಯ ಒಂದು ಚಿಕ್ಕ ಕಾರ್ನಷ್ಟು ಗಾತ್ರವಿರುತ್ತದೆ. ನೀಲಿ ತಿಮಿಂಗಿಲದ ಮರಿಯೇ ಒಂದು ದೊಡ್ಡ ಆನೆಯಷ್ಟು ತೂಕವಿದ್ದು 25 ಅಡಿ ಉದ್ದವಿರುತ್ತದೆ. ಅದು ತಾನು ಹುಟ್ಟಿದ ಪ್ರಥಮ 7 ತಿಂಗಳಲ್ಲಿ ಪ್ರತಿದಿನವೂ 400 ಲೀಟರ್ ಹಾಲು ಕುಡಿಯುತ್ತದೆ! ಈ ಜೀವಿ 50-80 ವರ್ಷ ಬದುಕಬಲ್ಲುದು. ಆದರೆ ಕ್ರೂರಿ ಮನುಷ್ಯನ ಬೇಟೆಯಿಂದಾಗಿ ನೀಲಿ ತಿಮಿಂಗಿಲದ ಸಂತತಿ ಕಡಿಮೆಯಾಗಿ ಈಗ ಬರೀ 10,000ಕ್ಕೆ ಇಳಿದಿದೆ.

2) ಬೃಹತ್ ಕಾಯದ ಬೃಹತ್ಕಾಯೋಸಾರಸ್

ನೀಲಿ ತಿಮಿಂಗಿಲ ಈಗ ಬದುಕಿರುವ ಎಲ್ಲ ಪ್ರಾಣಿಗಿಂತಲೂ ಬೃಹತ್ ಕಾಯದ ಪ್ರಾಣಿ. ಈ ಭೂಮಿಯ ಇತಿಹಾಸದಲ್ಲೂ ಅದೇ ಬೃಹತ್ ಪ್ರಾಣಿ ಎನ್ನಲಾಗುತ್ತದೆ. ಈಗ ತಿಳಿದಿರುವ ಅನೇಕ ಜಾತಿಯ ಡೈನೋಸಾರ್ಗಳೂ ನೀಲಿ ತಿಮಿಂಗಿಲಕ್ಕಿಂತ ಚಿಕ್ಕ ಗಾತ್ರದವು.
ಆದರೆ ತಮಿಳುನಾಡಿನ ತಿರುಚಿರಾಪಳ್ಳಿ ಜಿಲ್ಲೆಯಲ್ಲಿ ಬೃಹತ್ ಡೈನೋಸಾರ್ನ ಫನೀಕೃತತ ಪಳೆಯುಳಿಕೆ (ಫಾಸಿಲ್) ಸಿಕ್ಕಿದ್ದು ಈ ಜಾತಿಯ ಡೈನೋಸಾರ್ಗಳಿಗೆ `ಬೃಹತ್ ಕಾಯೋಸಾರಸ್' ಎನ್ನಲಾಗಿದೆ.
ಅದರ ಬಗ್ಗೆ ಖಚಿತ ಸಂಶೋಧನೆ ಇನ್ನೂ ಬಾಕಿಯಿದೆ. ಅದೇ ವಿಶ್ವದ ಅತಿ ಬೃಹತ್ ಪ್ರಾಣಿ ಎಂದೂ ಕೆಲವರು ಹೇಳುತ್ತಾರೆ. ಅದು ಸಾಮಾನ್ಯವಾಗಿ ಸುಮಾರು 40 ಮೀಟರ್ (130 ಅಡಿ) ಉದ್ದವಿದ್ದು 14 ಮೀಟರ್ (46 ಅಡಿ) ಎತ್ತರವಿತ್ತು ಎನ್ನಲಾಗಿದೆ. ಅದು 220 ಟನ್ ತೂಕವಿರುತ್ತಿತ್ತು ಎಂದು ಕೆಲವು ತಜ್ಞರ ಅನಿಸಿಕೆ. ಈ ಕುರಿತು ಹೆಚ್ಚಿನ ಅಧ್ಯಯನ ಇನ್ನೂ ನಡೆಯಬೇಕಿದೆ.


3) ದೊಡ್ಡ ಪ್ರಾಣಿ ಆಫ್ರಿಕಾ ಆನೆ



ನೆಲದ ಮೇಲೆ ನಡೆಯುವ ಪ್ರಾಣಿಗಳ ಪೈಕಿ ದೊಡ್ಡ ಪ್ರಾಣಿ ಎಂದರೆ ಆನೆ. ಅದರಲ್ಲೂ ಆಫ್ರಿಕಾದ `ಸವಾನಾ' ಆನೆ ಜಗತ್ತಿನ ಇತರ ಎಲ್ಲ ಪ್ರದೇಶಗಳ ಆನೆಗಳ ಪೈಕಿ ಅತಿ ದೊಡ್ಡದು. ಚೆನ್ನಾಗಿ ಬೆಳೆದ ಸವಾನಾ ಗಂಡು ಆನೆ 7500 ಕೆ.ಜಿ. ತೂಕವಿರುತ್ತದೆ. ಅಂದರೆ 75 ಕೆ.ಜಿ. ತೂಕವಿರುವ 100 ಜನರ ಒಟ್ಟು ತೂಕಕ್ಕೆ ಸಮ! ಆನೆಗಳು ದಿನಕ್ಕೆ 300 ಕೆಜಿಯಷ್ಟು ಆಹಾರ (ಎಲೆ, ಹಣ್ಣು ಇತ್ಯಾದಿ) ಸೇವಿಸುತ್ತವೆ.

4) ಎತ್ತರದ ಪ್ರಾಣಿ - ಜಿರಾಫೆ!!

ಜಗತ್ತಿನ ಅತಿ ಎತ್ತರದ ಸಸ್ತನಿ (ಮ್ಯಾಮಲ್) ಎಂದರೆ ಜಿರಾಫೆ (`ಜಿ-ರಾಫ್' ಶಬ್ದ ಕನ್ನಡದಲ್ಲಿ `ಜಿರಾಫೆ' ಆಗಿದೆ).
ಗಂಡು ಜಿರಾಫೆ ಸುಮಾರು 5.5 ಮೀಟರ್ ಎತ್ತರ ಬೆಳೆಯುತ್ತದೆ. ಅಂದರೆ ಮೂರು ನಾಲ್ಕು ಜನರು ಒಬ್ಬರ ಮೇಲೊಬ್ಬರು ನಿಂತುಕೊಂಡರೆ ಆಗುವ ಎತ್ತರದಷ್ಟು! ಆಫ್ರಿಕಾದ ಸಹಾರಾ ಮರುಭೂಮಿಯ ದಕ್ಷಿಣಕ್ಕೆ ಜಿರಾಫೆಗಳು ವಾಸಿಸುತ್ತವೆ.

5) ಕ್ಯಾಪಿಬಾರಾ -ಹಂದಿಗಾತ್ರದ ಹೆಗ್ಗಣ!

ಮೂಷಿಕಗಳ (ಇಲಿ-ಹೆಗ್ಗಣ) ಪೈಕಿ `ಕ್ಯಾಪಿಬಾರಾ' ಅತಿ ದೊಡ್ಡದು. ಇದು 1.3 ಮೀಟರ್ ಉದ್ದವಿರುವ ಭಾರಿ ಹೆಗ್ಗಣ! ದಕ್ಷಿಣ ಅಮೆರಿಕದ ಹಳ್ಳ-ಕೊಳ್ಳ, ಸರೋವರ ಹಾಗೂ ನದಿಗಳ ಸುತ್ತಮುತ್ತ ವಾಸಿಸುತ್ತದೆ.

ಭೂಮಿಯನ್ನೇ ಸುಡಬಲ್ಲ ಪರಮಾಣು ಬಾಂಬ್

 
ಪರಮಾಣು ಬಾಂಬ್ (ನ್ಯೂಕ್ಲಿಯರ್ ಬಾಂಬ್) ಪರಮಾಣು ವಿದಳನ ಹಾಗೂ ಸಂಶ್ಲೇಷಣಾ ಕ್ರಿಯೆ ಮೂಲಕ ವಿಧ್ವಂಸ ಮಾಡುವ ಮಾರಕ ಅಸ್ತ್ರ. ಅದು ಸಮೂಹ ನಾಶಕ ಅಸ್ತ್ರದ ಗುಂಪಿಗೆ ಸೇರಿದೆ.

ಸಾಮಾನ್ಯವಾಗಿ ಬಳಸುವ ಭಾರಿ ಸಾಂಪ್ರದಾಯಿಕ ಬಾಂಬ್ಗಳಿಗಿಂತಲೂ ಒಂದು ಚಿಕ ಪರಮಾಣು ಬಾಂಬ್ ಹೆಚ್ಚು ನಾಶ ಮಾಡುವ ಶಕ್ತಿ ಹೊಂದಿದೆ. ಒಂದೇ ಪರಮಾಣು ಬಾಂಬ್ ಮೂಲಕ ಒಂದು ಇಡೀ ನಗರವನ್ನೇ ಧ್ವಂಸ ಮಾಡಬಹುದು!

ಇತಿಹಾಸದಲ್ಲಿ ಈವರೆಗೆ ಎರಡು ಬಾರಿ ಮಾತ್ರ ಪರಮಾಣು ಬಾಂಬ್ಗಳನ್ನು ಬಳಸಲಾಗಿದೆ. ಎರಡನೇ ಜಾಗತಿಕ ಸಮರದ ವೇಳೆ 1945ರಲ್ಲಿ ಅಮೆರಿಕ ಜಪಾನ್ ದೇಶದ ಹಿರೋಶಿಮಾ ಹಾಗೂ ನಾಗಾಸಕಿ ಪಟ್ಟಣಗಳ ಮೇಲೆ ಪರಮಾಣು ಬಾಂಬ್ಗಳನ್ನು ಪ್ರಯೋಗಿಸಿತ್ತು. ಅದರಿಂದಾಗಿ ಸತ್ತವರು ಲಕ್ಷಾಂತರ ಮಂದಿ. ಅಂಗವಿಕಲರಾದವರು ಅಸಂಖ್ಯಾತ. ಪರಮಾಣು ವಿಕಿರಣದಿಂದ ಆ ಇಡೀ ಪ್ರದೇಶ ರೋಗರುಜಿನಗಳ ತವರಾಗಿ ಜನರು ಬದುಕಲು ಸಾಧ್ಯವಿಲ್ಲದ ಪರಿಸ್ಥಿತಿ ಉಂಟಾಯಿತು.

ಅದಾದ ನಂತರ ಈವರೆಗೆ ಸುಮಾರು 2000 ಬಾರಿ `ಪರೀಕ್ಷೆಗಾಗಿ' ಪರಮಾಣು ಬಾಂಬ್ಗಳನ್ನು ಅನೇಕ ದೇಶಗಳು ಸ್ಫೋಟಿಸಿವೆ. ಅಮೆರಿಕ, ಸೋವಿಯತ್ ಒಕ್ಕೂಟ, ಬ್ರಿಟನ್, ಫ್ರಾನ್ಸ್, ಚೀನಾ, ಭಾರತ, ಪಾಕಿಸ್ತಾನ ಹಾಗೂ ಉತ್ತರ ಕೊರಿಯಾ ಈವರೆಗೆ ಪರಮಾಣು ಸ್ಫೋಟ ಪರೀಕ್ಷೆ ನಡೆಸಿರುವ ದೇಶಗಳು. ಇತರ ಕೆಲವು ದೇಶಗಳ ಬಳಿ ಪರಮಾಣು ಬಾಂಬ್ ಇದ್ದರೂ ಈ ವಿಷಯವನ್ನು ಅವು ರಹಸ್ಯವಾಗಿ ಇಟ್ಟಿವೆ.

Tuesday 7 September 2010

ಕೋಲಾ ಪ್ರಿಸರ್ವೇಟಿವ್ ಸಹ ವಿಷ!


ಕೋಕ ಕೋಲಾ, ಪೆಪ್ಸಿ ಮ್ಯಾಕ್ಸ್, ಡಯಟ್ ಪೆಪ್ಸಿ, ಫಾಂಟಾ - ಇವುಗಳನ್ನು ಮಕ್ಕಳು ಕುಡಿಯಬಾರದು ಎಂದು ವಿಜ್ಞಾನಿಗಳು ಎಚ್ಚರಿಕೆ ನೀಡಿದ್ದಾರೆ.

ಈ ಕೋಲಾಗಳು ವಿಷಕಾರಿ ಪರಿಣಾಮ ಬೀರುತ್ತವೆ ಎನ್ನುವುದು ಅವರ ಆತಂಕ.

ವಿಜ್ಞಾನಿಗಳ ಪ್ರಕಾರ, `ಸಾಫ್ಟ್ ಡ್ರಿಂಕ್ಸ್'ಗಳು ಜೀವಕೋಶಗಳಿಗೆ (ಸೆಲ್ಸ್) ಹಾನಿ ಮಾಡುತ್ತವೆ. ಅವು ಬರೀ ಮಕ್ಕಳಿಗಷ್ಟೇ ಅಲ್ಲ, ಎಲ್ಲರಿಗೂ ಅಪಾಯಕಾರಿ. ಅವುಗಳಿಂದ ಪಿತ್ತಕೋಶದ (ಲಿವರ್) ಕಾಯಿಲೆ ಮತ್ತು ಪಾರ್ಕಿನ್ಸನ್  ಕಾಯಿಲೆ ಸಹ ಬರಬಹುದು ಎನ್ನಲಾಗಿದೆ.

ಕೋಲಾಗಳಲ್ಲಿರುವ ಕಾರ್ಬನ್, ಕೀಟನಾಶಕ ವಿಷಗಳು (ಪೆಸ್ಟಿಸೈಡ್ಸ್), ಅತಿಯಾದ ಸಕ್ಕರೆಯ ಅಂಶ ಅನಾರೋಗ್ಯಕಾರಿ. ಆದರೆ ಕೋಲಾಗಳು ಕೆಡದಂತೆ ಬಳಸುವ `ಪ್ರಿಸರ್ವೇಟಿವ್ ' ಆದ ಸೋಡಿಯಂ ಬೆಂಜೋನೇಟ್ ರಾಸಾಯನಿಕ ಇನ್ನೂ ದೊಡ್ಡ ಅಪರಾಧಿ. 

ಮಾಲಿಕ್ಯುಲರ್ ಬಯೋಲಜಿ ತಜ್ಞರು ಸೋಡಿಯಂ ಬೆಂಜೋನೈಟ್ ಅನ್ನು ತಮ್ಮ ಪ್ರಯೋಗಾಲಯದಲ್ಲಿ ಜೀವಂತ ಯೀಸ್ಟ್ ಜೀವಕೋಶಗಳ ಮೇಲೆ ಪ್ರಯೋಗಿಸಿ ನೋಡಿದಾಗ ಗಾಬರಿ ಹುಟ್ಟಿಸುವ ಸಂಗತಿ ಬಯಲಾಯಿತು. ಜೀವಕೋಶಗಳ ಮುಖ್ಯವಾದ ಭಾಗವಾದ ಮೈಟೋಕಾಂಡ್ರಿಯಾದ ಡಿಎನ್ಎ ಸ್ವರೂಪವನ್ನೇ ಈ ರಾಸಾಯನಿಕ ಮಾರ್ಪಡಿಸಿಬಿಡುತ್ತದೆ ಎಂಬ ಅಂಶ ತಿಳಿದುಬಂತು. ಮೈಟೋಕಾಂಡ್ರಿಯಾದ ಡಿಎನ್ಎಯನ್ನು ಈ ರಾಸಾಯನಿಕ ಎಷ್ಟು ಬದಲಿಸುತ್ತದೆ ಎಂದರೆ, ಡಿಎನ್ಎಯನ್ನೇ ಅದು ಸಂಪೂರ್ಣವಾಗಿ ನಿಷ್ಕ್ರಿಯಗೊಳಿಸಿಬಿಡುತ್ತದೆ. ಸಂಪೂರ್ಣ ಹಾಳು ಮಾಡಿಬಿಡುತ್ತದೆ.

ಮೈಟೋಕಾಂಡ್ರಿಯಾ ಎಂದರೇನು? ಅದು ಆಮ್ಲಜನಕವನ್ನು (ಆಕ್ಸಿಜನ್) ಹೀರುವ ಜೀವಕೋಶದ ಭಾಗ. ಅದರಿಂದಲೇ ಶರೀರಕ್ಕೆ ಶಕ್ತಿ ಬರುವುದು. ಅದೇ ಹಾಳಾದರೆ ಏನು ಗತಿ?

`ಅದರಿಂದ ಪಾರ್ಕಿನ್ಸನ್ ಹಾಗೂ ಇತರ ನರರೋಗಗಳು ಬರಬಹುದು. ಬೇಗ ವೃದ್ಧಾಪ್ಯ ಆವರಿಸಬಹುದು' ಎನ್ನುತ್ತಾರೆ ತಜ್ಞರು.

Monday 6 September 2010

ಪೆನ್ಸಿಲ್ ಪುರಾಣ


ಪೆನ್ಸಿಲ್ ಬಗ್ಗೆ ನಿಮಗೆಷ್ಟು ಗೊತ್ತು? ಒಂದಿಷ್ಟು ಕುತೂಹಲಕಾರಿ ಮಾಹಿತಿ ಇಲ್ಲಿದೆ!

ಅಂದಹಾಗೆ, `ಪೆನ್ಸಿಲ್' ಪದದ ಮೂಲ ಗೊತ್ತೆ? ಅದರ ಮೂಲ ಲ್ಯಾಟಿನ್ ಭಾಷೆಯ `ಪೆನಿಸಿಲಸ್'. ಹಾಗೆಂದರೆ `ಚಿಕ್ಕ ಬಾಲ' ಎಂದರ್ಥ!!

1564ರಲ್ಲಿ ಇಂಗ್ಲೆಂಡಿನಲ್ಲಿ ಗ್ರಾಫೈಟ್ ಪತ್ತೆಯಾಯಿತು. 1565ನಲ್ಲಿ ಪೆನ್ಸಿಲ್ ರೂಪಿಸಲಾಯಿತು. 1662ರಲ್ಲಿ ಜರ್ಮನಿಯ ಫ್ಯಾಕ್ಟರಿಯಲ್ಲಿ ಪೆನ್ಸಿಲ್ ಉತ್ಪಾದನೆ ಆರಂಭವಾಯಿತು. 1795ರಲ್ಲಿ ನಿಕೋಲಸ್ ಜಾಕ್ ಕಾಂಟೆ ಜೇಡಿಮಣ್ಣು ಹಾಗೂ ಗ್ರಾಫೈಟ್ ಮಿಶ್ರಮಾಡಿದ ಪೆನ್ಸಿಲ್ ತಯಾರಿಕೆಯ ಪೇಟೆಂಟ್ ಪಡೆದ.

ಹಿಂದೆ ಬರೆಯಲು ಲೆಡ್ (ಸೀಸ) ಕಡ್ಡಿ ಬಳಸುತ್ತಿದ್ದರು. ಪೆನ್ಸಿಲ್ ತುದಿಯನ್ನು ನಾವು ಈಗಲೂ `ಲೆಡ್' ಎನ್ನುತ್ತೇವಾದರೂ ಅದು ಲೆಡ್ ಅಲ್ಲ, ಗ್ರಾಫೈಟ್. ಹೀಗಾಗಿ ಪೆನ್ಸಿಲ್ ಚುಚ್ಚಿಕೊಂಡು ಗಾಯವಾದರೂ ಸೀಸದ ವಿಷ ಸೋಂಕುವ ಭಯವಿಲ್ಲ.

1828ರಲ್ಲಿ ಪೆನ್ಸಿಲ್ ಶಾರ್ಪನರ್ ರೂಪಿಸಿದವನ ಹೆಸರು ಬರ್ನಾಡ ಲಾಸಸಿಮೋನ್. 1847ರಲ್ಲಿ ಥೆರಿ ಡಿಸ್ ಎಸ್ಟ್ವಾಕ್ಸ್ ಉತ್ತಮ  ಶಾರ್ಪನರ್ ಗಳನ್ನು ಅಭಿವೃದ್ಧಿಪಡಿಸಿದ. ಇವರಿಬ್ಬರೂ ಪ್ರಾನ್ಸ್ ನವರು. ಅದೇ ದೇಶದ ಸಂಶೋಧಕರು ಪೆನ್ಸಿಲ್ ಗುರುತು ಅಳಿಸುವ `ರಬ್ಬರ್' ರೂಪಿಸಿದರು.

ಆರಂಭದಲ್ಲಿ ಪೆನ್ಸಿಲ್ಲಿಗೆ ಬಣ್ಣ ಹಾಕುತ್ತಿರಲಿಲ್ಲ. ಕಾರಣ ಅದರಲ್ಲಿ ಬಳಕೆಯಾಗಿರುವ ಉತ್ತಮ ಗುಣಮಟ್ಟದ ಮರದ ಕವಚದ ಪ್ರದರ್ಶನ! ಆದರೆ 1890ರ ಹೊತ್ತಿಗೆ ಪೆನ್ಸಿಲ್ ಗಳ ಮೇಲೆ ಬಣ್ಣದ ವಿನ್ಯಾಸ ಮಾಡಿ ಬ್ರಾಂಡ್ ನೇಮ್ ಬಳಸುವ ರೂಢಿಯನ್ನು ತಯಾರಿಕಾ ಕಂಪೆನಿಗಳು ಆರಂಭಿಸಿದವು.

18ನೇ ಶತಮಾನದಲ್ಲಿ ಉತ್ತಮ ಗ್ರಾಫೈಟ್ ಚೀನಾದಿಂದ ಸರಬರಾಜಾಗುತ್ತಿತ್ತು. ತಮ್ಮ ಪೆನ್ಸಿಲ್ ನಲ್ಲಿ ಚೀನಾ ಗಾಫೈಟ್ ಇದೆ ಎಂದು ಹೇಳಿಕೊಳ್ಳಲು ಕೆಲವು ಕಂಪೆನಿಗಳು ಪೆನ್ಸಿಲ್ ಮೇಲೆ ಹಳದಿ ಗೆರೆ ಹಾಕುತ್ತಿದ್ದವು (ಚೀನಾದಲ್ಲಿ ಹಳದಿ ವರ್ಣಕ್ಕೆ ವಿಶೇಷ ಗೌರವ ಇತ್ತು). ಈಗಲೂ ಬಹುತೇಕ ಪೆನ್ಸಿಲ್ ಗಳ ಮೇಲೆ ಹಳದಿ ಗೆರೆಗಳಿವೆ!!

ಪೆನ್ಸಿಲ್ ಗಳಿಂದ ಗುರುತ್ವಾಕರ್ಷಣೆ ಇಲ್ಲದ ಬಾಹ್ಯಾಕಾಶದಲ್ಲೂ ಬರೆಯಬಹುದು! ಇಂಕ್ ಪೆನ್ನುಗಳಿಂದ ಸಾಧ್ಯವಿಲ್ಲ.

ಜಗತ್ತಿನ ಅತಿ ದೊಡ್ಡ ಪೆನ್ಸಿಲ್ `ಕ್ಯಾಸ್ಟೆಲ್ 9000' ಮಲೇಷಿಯಾದ ಕ್ವಾಲಾಲಂಪುರ್ ಬಳಿ ಪ್ರದರ್ಶನಕ್ಕಿದೆ. ಅದರ ಎತ್ತರ 85 ಅಡಿ!!

ರಜೆಯಲ್ಲಿ ಮಾಡಲು ಯಾವ ಕೆಲಸವೂ ಇಲ್ಲವೆ? ಒಂದು ಹೊಸ ಪೆನ್ಸಿಲ್ ತೆಗೆದುಕೊಳ್ಳಿ. ಅದು ಮುಗಿಯುವವರೆಗೂ ಬರೆಯಲು ಆರಂಭಿಸಿ. ಅದರಲ್ಲಿ 45,000 ಪದಗಳನ್ನು ಬರೆಯಬಹುದು. ಅಥವಾ ಗೆರೆ ಎಳೆದುಕೊಂಡು ಹೊರಡಿ. 56 ಕಿಲೋಮೀಟರ್ ಗೆರೆ ಎಳೆಯಬಹುದು! ಯಾರೂ ಇನ್ನೂ ಈ ದಾಖಲೆ ನಿರ್ಮಿಸಿಲ್ಲ!!

ಈಗ ಜಗತ್ತಿನಲ್ಲಿ ಉತ್ಪಾದಿಸುವ ಪೆನ್ಸಿಲ್ ಗಳಲ್ಲಿ ಅರ್ಧಭಾಗವನ್ನು ಬರೀ ಚೀನಾ ಒಂದೇ ಉತ್ಪಾದಿಸುತ್ತದೆ. 2004ರಲ್ಲಿ ಚೀನಾ ಫ್ಯಾಕ್ಟರಿಗಳು ತಯಾರಿಸಿದ ಪೆನ್ಸಿಲ್ ಗಳ ಸಂಖ್ಯೆ 1000 ಕೋಟಿ! ಇಷ್ಟು ಪೆನ್ಸಿಲ್ ಗಳಿಂದ ಇಡೀ ಭೂಗೋಳದ ಸುತ್ತ 40 ಬಾರಿ ಗೆರೆ ಎಳೆಯಬಹುದು!!

Tuesday 10 August 2010

ಸಣಕಲು ಕಡ್ಡಿಗಳಲ್ಲೂ ಇದೆ ಬೊಜ್ಜು!

ನೋಡಲು ತೆಳ್ಳಗೆ ಸಣಕಲು ಕಡ್ಡಿ ಹಾಗೆ ಇದ್ದರೆ `ಹೋ ಇವರ ಶರೀರದಲ್ಲಿ ಕೊಬ್ಬಿನಂಶವೇ ಇಲ್ಲ' ಎನ್ನುತ್ತಾರಲ್ಲವೆ? ಅದು ಸುಳ್ಳು!

ಶರೀರದಲ್ಲಿ ಕೊಬ್ಬು ಜಾಸ್ತಿಯಾದರೆ ಏನಾಗುತ್ತದೆ? `ಬೊಜ್ಜು' ಬೆಳೆಯುತ್ತದೆ. ಡುಮ್ಮಗಾಗುತ್ತಾರೆ. ಡೊಳ್ಳು ಹೊಟ್ಟೆ ಬೆಳೆಯುತ್ತದೆ. ತೂಕ ತುಂಬಾ ಹೆಚ್ಚಾಗುತ್ತದೆ. ಹೆಚ್ಚು ತೂಕವಿದ್ದರೆ ಆರೋಗ್ಯ ಹಾಳಾಗುತ್ತದೆ. ಹೃದಯ ರೋಗಗಳು, ಹೆಚ್ಚು ರಕ್ತದೊತ್ತಡ, ಮಧುಮೇಹ ರೋಗ ಬರಬಹುದು. ಜೀವಕ್ಕೂ ಅಪಾಯ.

ಹಾಗಾದರೆ ಸಣ್ಣಗೆ ಇದ್ದರೆ ಈ ರೋಗಗಳು ಬರುವುದಿಲ್ಲವೆ? ಸಣ್ಣಗಿರುವವರಲ್ಲಿ ಕೊಬ್ಬಿನಂಶ ಕಡಿಮೆ. ಹೀಗಾಗಿ ಅವರಿಗೆ ಅಪಾಯವೂ ಕಡಿಮೆ ಎನ್ನುವುದು ಸಾಮಾನ್ಯವಾಗಿ ತಜ್ಞರ ಅಭಿಪ್ರಾಯ (ಆದರೆ ತೀರಾ  ಸಣ್ಣಗಿದ್ದು ಶಕ್ತಿಯೇ ಇಲ್ಲದೆ ದುರ್ಬಲವಾಗಿರಬಾರದು).

ಆದರೆ ಸಣ್ಣಗಿರುವುದು ಎಂದರೇನು? ಸಾಮಾನ್ಯವಾಗಿ ನೋಡಲು ಸಣ್ಣಗೆ ಕಾಣುವವರನ್ನು ನಾವು `ಸಣ್ಣಗಿದ್ದಾರೆ' ಎನ್ನುತ್ತೇವೆ ಅಲ್ಲವೆ? ಅವರು ಸಣ್ಣಗೆ ಕಾಣಲು ಕಾರಣ ಅವರ ಚರ್ಮದ ಕೆಳಗೆ ಕೊಬ್ಬಿನಂಶ ಅಷ್ಟಾಗಿ ಶೇಖರಣೆ ಆಗದಿರುವುದು. ಚರ್ಮದ ಕೆಳಗೆ ಹೆಚ್ಚು ಕೊಬ್ಬು ತುಂಬಿಕೊಂಡಿರುವವರಿಗೆ `ಬೊಜ್ಜು ಇದೆ' ಎನ್ನುತ್ತೇವೆ.

ಸಣ್ಣಗಿರುವವರಲ್ಲಿ ಕೊಬ್ಬು ಕಡಿಮೆ. ಬೊಜ್ಜು ವ್ಯಕ್ತಿಗಳಿಗೆ ಕೊಬ್ಬು ಜಾಸ್ತಿ ಎಂಬುದು ಇದರರ್ಥ. ಈ ಮಾತು ಸರಿಯೋ? ತಪ್ಪೋ?

ತಪ್ಪು! ಈಗ ವಿಜ್ಞಾನಿಗಳು ಹೇಳುತ್ತಿರುವ ಹಾಗೆ ಸಣ್ಣಗೆ ಕಾಣುವವರಲ್ಲಿ ಕೊಬ್ಬು ಕಡಿಮೆ ಶೇಖರಣೆಯಾಗಿದೆ ಎನ್ನಲು ಸಾಧ್ಯವಿಲ್ಲ!

ಏನಪ್ಪ ಇದು ಎನ್ನಬೇಡಿ. ಸಣ್ಣಗೆ ಕಾಣುವವರ ಚರ್ಮದ ಅಡಿಯಲ್ಲಿ ಕೊಬ್ಬು ಶೇಖರಣೆ ಆಗದೇ ಇರಬಹುದು. ಆದರೆ ನಮಗೆ ಕಾಣದ ಹಾಗೆ ಅವರ ಶರೀರದ ತೀರಾ ಒಳಗಡೆ ಕೊಬ್ಬು ಶೇಖರಣೆ ಆಗಿರಬಹುದು. ಅದು ಅವರಿಗೂ ಅಪಾಯ ಉಂಟುಮಾಡಬಹುದು ಎಂದು ತಜ್ಞರು ಹೇಳುತ್ತಾರೆ.

`ಎಂಆರ್ಐ ಸ್ಕ್ಯಾನ್' ಎಂಬ ಒಂದು ವಿಧಾನ ಇದೆ. ಅದರ ಮೂಲಕ ಶರೀರದ ಒಳಗಿನ ಚಿತ್ರಗಳನ್ನು ತೆಗೆಯಬಹುದು. ಬ್ರಿಟನ್ನಿನ ಡಾ. ಜಿಮ್ಮಿ ಬೆಲ್ ಮತ್ತು ಅವರ ತಂಡ 1994ರಿಂದ 2007ರವರೆಗೆ ಸುಮಾರು 800 ಜನರನ್ನು ಎಂಆರ್ಐ ಮೆಶಿನ್ ಮೂಲಕ ಸ್ಕ್ಯಾನ್ ಮಾಡಿ ನೋಡಿದಾಗ ತಿಳಿದು ಬಂದಿರುವ ವಿಷಯಗಳು ಆಶ್ಚರ್ಯ ಹಾಗೂ ಗಾಬರಿ ಹುಟ್ಟಿಸುತ್ತವೆ.

ಇಲ್ಲಿ ಕೊಟ್ಟಿರುವ ಮನುಷ್ಯನ ಶರೀರದ ಒಳಗಿನ ಸ್ಕ್ಯಾನ್ ಚಿತ್ರ ನೋಡಿ. 190 ಸೆಂ.ಮೀ. ಎತ್ತರದ (6 ಅಡಿ 4 ಇಂಚು) ಈ ವ್ಯಕ್ತಿಯ ತೂಕ ಕೇವಲ 79 ಕೆ.ಜಿ. ಅಷ್ಟೇ. `ಇಷ್ಟು ಎತ್ತರಕ್ಕೆ ಇಷ್ಟು ತೂಕ ಇದ್ದರೆ ಓಕೆ' ಎನ್ನುತ್ತಾರೆ ಅಲ್ಲವೆ? ಆ ಪ್ರಕಾರ ಈತನ ತೂಕ `ಓಕೆ'. ಆದರೆ ಎಂಆರ್ಐ ಸ್ಕ್ಯಾನ್ ಮಾಡಿರುವ ಚಿತ್ರ ತೋರಿಸುವ ವಿಷಯವೇ ಬೇರೆ. ಈ ಚಿತ್ರದಲ್ಲಿ ಹಳದಿ ಬಣ್ಣ ಇರುವುದೆಲ್ಲ ಶರೀರದ ಒಳಭಾಗದಲ್ಲಿ ಸಂಗ್ರಹವಾಗಿರುವ ಕೊಬ್ಬು. ಚರ್ಮದ ಕೆಳಗಿನ ಕೊಬ್ಬು ಹಸಿರು ಬಣ್ಣದ್ದು. ಅದು ಹೆಚ್ಚಲ್ಲ. ಆದರೆ ಹೃದಯ, ಪಿತ್ತ ಜನಕಾಂಗ ಅಥವಾ ಮೇದೋಜೀರಕದ ಸುತ್ತ ಎಷ್ಟು ಒಳಕೊಬ್ಬು ಸಂಗ್ರಹವಾಗಿದೆ ನೋಡಿದಿರಾ? ಹೊರಗಿನ ಬೊಜ್ಜಿನಷ್ಟೇ ಈ ಕೊಬ್ಬು ಅಪಾಯಕಾರಿ ಎನ್ನುತ್ತಾರೆ ತಜ್ಞರು.

ಸಣ್ಣಗೆ ಕಾಣುವವರು ತಾವು ಚೆನ್ನಾಗಿದ್ದೇವೆ ಎಂದುಕೊಳ್ಳುತ್ತಾರೆ. ಆದರೆ ತಮ್ಮ `ಒಳಗೆ' ಕೊಬ್ಬು ಎಷ್ಟಿದೆ ಎಂಬುದು ಅವರಿಗೆ ಗೊತ್ತಿರುವುದಿಲ್ಲ.

ವ್ಯಾಯಾಮ ಮಾಡುವವರಿಗೆ ಹೊರಕೊಬ್ಬೂ ಕಡಿಮೆ, ಒಳಕೊಬ್ಬೂ ಕಡಿಮೆ. ಆದರೆ ವ್ಯಾಯಾಮ ಮಾಡದೇ ಬರೀ ಕಡಿಮೆ ತಿನ್ನುವುದರಿಂದ ಹೊರಕೊಬ್ಬು ಕರಗಿದರೂ ಒಳಕೊಬ್ಬು ಕರಗುವುದಿಲ್ಲ. ಈಚೆಗೆ ಮಕ್ಕಳಲ್ಲೂ ಬೊಜ್ಜು ಜಾಸ್ತಿಯಾಗುತ್ತಿದೆ.

ಆದ್ದರಿಂದ ಕೊಬ್ಬಿನ (ಎಣ್ಣೆ, ತುಪ್ಪ, ಬೆಣ್ಣೆ, ಚೀಸ್) ಆಹಾರ ಕಡಿಮೆ ಮಾಡುವುದಷ್ಟೇ ಅಲ್ಲ, ವ್ಯಾಯಾಮವನ್ನೂ ಮಾಡಬೇಕು. ಮೈದಾನದಲ್ಲಿ ಚೆನ್ನಾಗಿ ಆಟವಾಡಬೇಕು.

Wednesday 4 August 2010

ರಾಷ್ಟ್ರಪತಿ ಭವನಕ್ಕೊಂದು ಭೇಟಿ

ಮೇ 17, 2010.

ಅಂದು ನನ್ನ ಪುಟ್ಟ ಮಗಳು ಅನಿಶಾ ಗೌರಿ ದೆಹಲಿಯ `ರಾಷ್ಟ್ರಪತಿ ಭವನ'ಕ್ಕೆ ಭೇಟಿ ನೀಡಿ ಕುಣಿದಾಡಿದಳು.

ನಿಮಗೆ ಗೊತ್ತೆ? ಜಗತ್ತಿನ ದೊಡ್ಡ `ಅಧಿಕೃತ' ನಿವಾಸ, ಅಂದರೆ ಪ್ರಧಾನ ಮಂತ್ರಿಗಳು - ರಾಷ್ಟ್ರಾಧ್ಯಕ್ಷರುಗಳು ವಾಸಿಸುವ ಸ್ಥಳ, ನಮ್ಮ ಭಾರತದ `ರಾಷ್ಟ್ರಪತಿ ಭವನ'!

`ರಾಷ್ಟ್ರಪತಿ ಭವನ' ಭಾರತದ ರಾಷ್ಟ್ರಾಧ್ಯಕ್ಷರು ವಾಸಿಸುವ ಅಧಿಕೃತ ಮನೆ. ಅದು ನವದೆಹಲಿಯಲ್ಲಿದೆ. ಅದರಲ್ಲೀಗ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ತಮ್ಮ ಕುಟುಂಬದೊಂದಿಗೆ ನೆಲೆಸಿದ್ದಾರೆ.

1950 ರವರೆಗೂ ಅದನ್ನು `ವೈಸ್ರಾಯ್ ಹೌಸ್' ಎನ್ನಲಾಗುತ್ತಿತ್ತು. ಸ್ವಾತಂತ್ರ್ಯಪೂರ್ವದಲ್ಲಿ ಭಾರತದಲ್ಲಿರುವ ಬ್ರಿಟಿಷ್ ಗವರ್ನರ್ ಜನರಲ್ಗಳು (ಬ್ರಿಟಿಷ್ ಸಕರ್ಾರದ ಪರವಾಗಿ ಭಾರತದಲ್ಲಿ ಆಡಳಿತ ನಡೆಸುತ್ತಿದ್ದ ಮುಖ್ಯಸ್ಥರು) ವಾಸಿಸಲು ಈ `ವೈಸ್ರಾಯ್ ಹೌಸ್' ಅರಮನೆಯನ್ನು ಬ್ರಿಟಿಷ್ ಸಕರ್ಾರ ಕಟ್ಟಿಸಿತು.

1911ರಲ್ಲಿ ಬ್ರಿಟಿಷ್ ಭಾರತದ ರಾಜಧಾನಿಯನ್ನು ಕೋಲ್ಕತಾದಿಂದ ದೆಹಲಿಗೆ ಬದಲಿಸಲು ನಿರ್ಧರಿಸಲಾಯಿತು. ನವದೆಹಲಿಯ ನೀಲನಕ್ಷೆ ನಿಮರ್ಿಸುವ ಸಮಯದಲ್ಲಿ ಗವರ್ನರ್ ಜನರಲ್ಗಳಿಗೆ ಭವ್ಯವಾದ ನಿವಾಸ ನಿಮರ್ಿಸಿಕೊಡಲು ಯೋಜನೆ ರೂಪಿಸಲಾಯಿತು. ಅದರ ವಿನ್ಯಾಸದ ಹೊಣೆಯನ್ನು ಬ್ರಿಟಿಷ್ ವಾಸ್ತುವಿನ್ಯಾಸಗಾರ ಎಡ್ವಿನ್ ಲಟ್ಯನ್ಸ್ಗೆ ವಹಿಸಲಾಯಿತು.
ಬಹು ಚಚರ್ೆಯ ನಂತರ ಈ ಕಟ್ಟಡದ ವಿನ್ಯಾಸ ಐರೋಪ್ಯ ಕ್ಲಾಸಿಕಲ್ ಮಾದರಿಯಲ್ಲಿರಬೇಕು ಎಂದು ನಿರ್ಧರಿಸಲಾಯಿತು. ಅನಂತರ ಕ್ರಮೇಣ ಅದಕ್ಕೆ ಭಾರತೀಯ, ಮುಘಲ್ ಮತ್ತು ಇತರ ಶೈಲಿಗಳೂ ಒಂದಿಷ್ಟು ಸೇರಿಕೊಂಡವು.


ಕಟ್ಟಡದ ಮಧ್ಯಭಾಗದಲ್ಲಿರುವ ದೊಡ್ಡ ಗುಮ್ಮಟ ಪ್ರಮುಖ ಆಕರ್ಷಣೆ. ಅದನ್ನು ರೋಮ್ನ ಪ್ಯಾಂಥಿಯನ್ನಿಂದ ಸ್ಫೂತರ್ಿ ಪಡೆದು ನಿಮರ್ಿಸಿದ್ದಾಗಿ ಲಟ್ಯನ್ ಹೇಳಿಕೊಂಡಿದ್ದರೂ ಅದರಲ್ಲಿ ಮೌರ್ಯರ ಕಾಲದ ಸಾಂಚಿಯ ಬೌದ್ಧ ಸ್ತೂಪಗಳ ವಿನ್ಯಾಸದ ಪ್ರಭಾವ ಕಾಣುತ್ತದೆ.

1947ರಲ್ಲಿ ಭಾರತ ಸ್ವತಂತ್ರವಾದಾಗ ಕಡೆಯ ತಾತ್ಕಾಲಿಕ ಗವರ್ನರ್ ಜನರಲ್ ಇದರಲ್ಲಿ ವಾಸವಾಗಿದ್ದರು. 1950ರಲ್ಲಿ ಭಾರತ ಗಣರಾಜ್ಯವಾದಾಗ ಈ ಕಟ್ಟಡಕ್ಕೆ `ರಾಷ್ಟ್ರಪತಿ ಭವನ' ಎಂದು ನಾಮಕರಣ ಮಾಡಿ, ಭಾರತದ ರಾಷ್ಟ್ರಪತಿಗಳ ಅಧಿಕೃತ ನಿವಾಸವಾಗಿ ಘೋಷಿಸಲಾಯಿತು.

ರಾಷ್ಟ್ರಪತಿ ಭವನದಲ್ಲಿ 340 ಸಾಲಂಕೃತ ಕೊಠಡಿಗಳಿವೆ. ಕಟ್ಟಡದ ವಿನ್ಯಾಸ ಚೌಕಾಕಾರವಾಗಿದೆ. ಇದರ ವಿಸ್ತೀರ್ಣ ಸುಮಾರು 2,00,000 ಚದರ ಅಡಿ! ಪ್ರಪಂಚದ ಎಲ್ಲ ಅಧ್ಯಕ್ಷರ ಅಧಿಕೃತ ನಿವಾಸಗಳ ಪೈಕಿ ಇದೇ ದೊಡ್ಡದು!

ಇದನ್ನು ಕಟ್ಟಲು 70 ಕೋಟಿ ಇಟ್ಟಿಗೆಗಳು, 30 ಲಕ್ಷ ಘನ ಅಡಿಯಷ್ಟು ಕಲ್ಲುಗಳು ಬಳಸಲ್ಪಟ್ಟಿವೆ. ಉಕ್ಕು, ಕಬ್ಬಿಣ ಹೆಚ್ಚಾಗಿ ಬಳಸದೇ ಇರುವುದು ಇದರ ವಿಶೇಷತೆ.

ವೈಸ್ರಾಯ್ಗೆ (ರಾಷ್ಟ್ರಪತಿಗೆ) ಮತ್ತು ಅತಿಥಿಗಳಿಗೆ ಪ್ರತ್ಯೇಕ ವಿಭಾಗಗಳಿವೆ. ವೈಸ್ರಾಯ್ ವಿಭಾಗ ನಾಲ್ಕು ಅಂತಸ್ತಿನ ಬೃಹತ್ ಅರಮನೆ. ಅದರಲ್ಲಿ ಅನೇಕ ಹಾಲ್ಗಳಿವೆ. ಈ ವಿಭಾಗ ಎಷ್ಟು ದೊಡ್ಡದೆಂದರೆ ದೇಶದ ಪ್ರಥಮ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅದರಲ್ಲಿ ವಾಸಿಸಲು ಒಪ್ಪದೇ ಅತಿಥಿ ವಿಭಾಗದಲ್ಲಿ ವಾಸವಾಗಿದ್ದರು! ಇದೇ ಸಂಪ್ರದಾಯವನ್ನು ಮುಂದಿನ ಹಲವು ರಾಷ್ಟ್ರಪತಿಗಳು ಅನುಸರಿಸಿದರು. ಡಾ. ಅಬ್ದುಲ್ ಕಲಾಂ ರಾಷ್ಟ್ರಪತಿ ಭವನಕ್ಕೆ ಆಡಿಯೋ-ವಿಶುಯಲ್ ಸ್ಟೂಡಿಯೋವನ್ನು ಸೇರಿಸಿದರೂ ತಾವು ಮಾತ್ರ ಕೇವಲ ಎರಡು ಕೋಣೆಗಳನ್ನು ಬಳಸುತ್ತಿದ್ದರು!


ರಾಷ್ಟ್ರಪತಿ ಭವನದ ದೊಡ್ಡ ಗುಮ್ಮಟದ ಕೆಳಗೆ ಸರಿಯಾಗಿ `ದಬರ್ಾರ್ ಹಾಲ್' ಇದೆ. ಬ್ರಿಟಿಷ್ ಕಾಲದಲ್ಲಿ ಅದನ್ನು ಸಿಂಹಾಸನ ಹಾಲ್ ಎನ್ನುತ್ತಿದ್ದರು. ಈ ಹಾಲ್ನಲ್ಲಿ 2 ಟನ್ ತೂಕದ ಭಾರಿ ಶಾಂಡಲಿಯರ್ (ತೂಗು-ದೀಪಗುಚ್ಛ) ಇದೆ. 33 ಅಡಿ ಎತ್ತರದಿಂದ ಅದನ್ನು ತೂಗುಹಾಕಲಾಗಿದೆ. ಈ ಹಾಲ್ನ ಎಲ್ಲ ಮೂಲೆಗಳಲ್ಲೂ ಕೋಣೆಗಳಿವೆ. ಎರಡು ಅಧಿಕೃತ ದಿವಾನ ಕೋಣೆಗಳು, ಒಂದು ಅಧಿಕೃತ ಭೋಜನಕೂಟದ ಕೋಣೆ, ಇನ್ನೊಂದು ಅಧಿಕೃತ ಗ್ರಂಥಾಲಯ. ಇನ್ನೂ ಅನೇಕ ಕೋಣೆಗಳಿವೆ. ದೊಡ್ಡ ಭೋಜನಾಲಯವಿದೆ. ಅದರಲ್ಲಿ ಅತಿ ದೊಡ್ಡ ಟೇಬಲ್ ಇದೆ. ಕುಳಿತುಕೊಳ್ಳುವ ಕೊಠಡಿಗಳಿವೆ. ಬಿಲಿಯಡ್ಸರ್್ ಆಟದ ಕೊಠಡಿಯಿದೆ. ನರ್ತನ ಕೋಣೆಯಿದೆ.

`ಅಶೋಕಾ ರೂಮ್' ಎಂಬುದು ಈ ಭವನದ ವೈಭವೋಪೇತ, ಅಧಿಕೃತ, ಮಲಗುವ ಕೋಣೆ. ಅದರಲ್ಲಿ ವೈಸ್ರಾಯ್ಗಳು ಮಲಗಿದ್ದರು. ಆದರೆ ಈವರೆಗೆ ಯಾವ ರಾಷ್ಟ್ರಪತಿಯೂ ಅದನ್ನು ಬಳಸಿಲ್ಲ. ಬದಲಾಗಿ ಅತಿಥಿಗಳ ಬೆಡ್ರೂಮ್ಗಳ ಪೈಕಿ ಯಾವುದಾರೊಂದನ್ನು ಬಳಸುತ್ತ ಬಂದಿದ್ದಾರೆ!

ರಾಷ್ಟ್ರಪತಿ ಭವನದ ಮುಘಲ್ ಶೈಲಿಯ ಗುಲಾಬಿ ಉದ್ಯಾನದಲ್ಲಿ ಅನೇಕ ರೀತಿಯ ಗುಲಾಬಿಗಳಿವೆ. ಅದನ್ನು ಪ್ರತಿ ಫೆಬ್ರವರಿಯಲ್ಲಿ ಸಾರ್ವಜನಿಕ ದರ್ಶನಕ್ಕಾಗಿ ತೆರೆಯಲಾಗುವುದು.

`ಫéನಾ' ಹಿಂದಿ ಚಿತ್ರದ `ದೇಶ್ ರಂಗೀಲಾ' ಹಾಡನ್ನು ರಾಷ್ಟ್ರಪತಿ ಭವನದಲ್ಲಿ ಚಿತ್ರೀಕರಿಸಿಕೊಳ್ಳಲಾಗಿದೆ.

ಇಷ್ಟೆಲ್ಲ ವಿವರಗಳನ್ನು ನಾನು ಅನಿಶಾಳಿಗೆ ಹೇಳುವುದು ಕಷ್ಟ. ಅವಳಿನ್ನೂ ಚಿಕ್ಕವಳು. ಅವಳಿಗೆ ತಿಳಿಯುವಷ್ಟನ್ನು ಹೇಳಿದ್ದೇನೆ. ದೇಶದ ಪ್ರಮುಖ ವ್ಯಕ್ತಿಗಳನ್ನು ಅವಳು ಗುರುತಿಸುತ್ತಾಳೆ. ಟಿವಿಯಲ್ಲಿ ಹಾಗೂ ಫೋಟೋಗಳಲ್ಲಿ ಮಾತ್ರ `ರಾಷ್ಟ್ರಪತಿ ಭವನ' ಹಾಗೂ `ಪ್ರತಿಭಾ ಪಾಟೀಲ್' ಎಂದು ಗುರುತಿಸುತ್ತಿದ್ದ ಆ ಎಳೆಯ ಮನಸ್ಸು ನಿಜವಾದ ರಾಷ್ಟ್ರಪತಿ ಭವನವನ್ನು ಕಂಡಾಗ ಬಹಳ ಹರುಷಪಟ್ಟಿತು.

Thursday 22 July 2010

ಏಕೆ ದಿನವೂ ಹಣ್ಣುಗಳನ್ನು ತಿನ್ನಬೇಕು?

ನಿಮ್ಮ ಜ್ಞಾಪಕಶಕ್ತಿ ಚುರುಕಾಗಿರಬೇಕೆ? ಬುದ್ಧಿ ಮೊನಚಾಗಿರಬೇಕೆ? ಪರೀಕ್ಷೆಗಳಲ್ಲಿ ಒಳ್ಳೆಯ ಮಾರ್ಕ್ಸ್ ಪಡೆಯಬೇಕು ಎಂದುಕೊಂಡಿದ್ದೀರಾ? ಸದಾ ಲವಲವಿಕೆಯಿಂದ ಚೂಟಿಯಾಗಿದ್ದು ಎಲ್ಲರ ಕೈಲೂ `ಭೇಷ್' ಎನಿಸಿಕೊಳ್ಳಬೇಕೆ? ಆರೋಗ್ಯ `ಫಸ್ಟ್ಕ್ಲಾಸ್' ಆಗಿರಬೇಕೆ? ನೀವು ಎಲ್ಲರಿಗಿಂತಲೂ ನಿಧಾನವಾಗಿ ಮುದುಕರಾಗಲು ಇಚ್ಛಿಸುತ್ತೀರಾ? ಇಲ್ಲಿದೆ `ರುಚಿಕರ' ಉಪಾಯ!!

ದಿನವೂ ತಾಜಾ ಹಣ್ಣುಗಳನ್ನು ತಿನ್ನಿ. ಹಣ್ಣುಗಳು ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ ಎಂಬುದು ಹಿಂದಿನ ಕಾಲದಿಂದಲೂ ಜನರಿಗೆ ಗೊತ್ತು. ಆದರೆ ಆಧುನಿಕ ಮನುಷ್ಯನ ಆಹಾರದಲ್ಲಿ ಹಣ್ಣಿಗೆ ಸ್ಥಾನವೇ ಇಲ್ಲವಾಗಿದೆ. ಅಥವಾ `ಊಟ ಮಾಡಿದ ನಂತರ ತಿನ್ನುವ' ಕೊನೆಯ ಸ್ಥಾನ ಹಣ್ಣುಗಳಿಗೆ ನೀಡಲಾಗಿದೆ! ಹಣ್ಣುಗಳು ಆರೋಗ್ಯ, ಆಯುಷ್ಯ ಹೆಚ್ಚಿಸುತ್ತವೆ ಎಂಬ ಅಂಶ ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಹಣ್ಣುಗಳು ನಿಮ್ಮ ಆಹಾರದ ಪ್ರಮುಖ ಭಾಗವಾಗಲೇಬೇಕು.

ಈ ಭೂಮಿಯಲ್ಲಿ ಶೇ. 70 ಭಾಗ ನೀರು. ಮನುಷ್ಯ ಶರೀರದಲ್ಲೂ ಶೇ. 80ರಷ್ಟು ನೀರು! ಹಣ್ಣುಗಳ ಶೇ. 80ರಷ್ಟು ಪಾಲೂ ನೀರೇ. ನಿಮಗೆ ಬೇಕಾದ ಪೌಷ್ಟಿಕಾಂಶಗಳೆಲ್ಲವೂ ಇದ್ದು ನಿಮ್ಮ ಶರೀರ ಪ್ರಕೃತಿಗೆ ಹಣ್ಣು ಎಷ್ಟು ಹೊಂದಿಕೊಂಡಿದೆ ನೋಡಿದಿರಾ?

`ಬ್ಯಾಡ್ ಕೊಲೆಸ್ಟೆರಾಲ್' (ರಕ್ತದಲ್ಲಿನ ಒಂದು ರೀತಿಯ ಕೊಬ್ಬಿನಂಶ) ಬಗ್ಗೆ ಕೇಳಿದ್ದೀರಾ? ಅದರಿಂದ ಹೃದಯ ರೋಗಗಳು ಬರುತ್ತವೆ. ಹಣ್ಣಿನಲ್ಲಿ ಅದು ಇಲ್ಲವೇ ಇಲ್ಲ!!

ವ್ಹಾ! ಇದು ಬುದ್ಧಿಶಕ್ತಿ ಹೆಚ್ಚಿಸುವ ಮ್ಯಾಜಿಕ್ ಆಹಾರ! ಹಣ್ಣುಗಳು ಕೇವಲ ಹೊಟ್ಟೆಗೆ ಮಾತ್ರವಲ್ಲ, ಮೆದುಳಿಗೂ ಅತ್ಯುತ್ತಮ ಆಹಾರ!! ತಾಜಾ ಹಣ್ಣು ತಿನ್ನುವವರ ಮೆದುಳೂ `ತಾಜಾ' ಆಗಿರುತ್ತದೆ. ಅವರ ನೆನಪಿನ ಶಕ್ತಿ ಚುರುಕಾಗಿರುತ್ತದೆ. ಅವರಿಗೆ ಓದಿದ್ದು, ಕೇಳಿದ್ದು ಸುಲಭವಾಗಿ ಅರ್ಥವಾಗುತ್ತದೆ. ವಿಷಯಗಳು ಬೇಕೆಂದಾಗ ಚಕ್ಕನೆ, ವೇಗವಾಗಿ ನೆನಪಿಗೆ ಬರುತ್ತವೆ. ``ನಾಲಿಗೆ ತುದೀಲಿದೆ. ಹೇಳ್ತೀನಿ, ಒಂದ್ನಿಮಿಷ ಇರು'' ಎನುವ ಗೋಜೇ ಇಲ್ಲ!

ದಿನವೂ ಹಣ್ಣು ತಿನ್ನುವವರಿಗೆ ಮಾನಸಿಕ ಸಮಸ್ಯೆಯೂ ಕಡಿಮೆಯಂತೆ, ಆತ್ಮವಿಶ್ವಾಸ ಹೆಚ್ಚಂತೆ. ನಾವು ಚೆನ್ನಾಗಿರುವುದಷ್ಟೇ ಮುಖ್ಯವಲ್ಲ. `ನಾವು ಚೆನ್ನಾಗಿದ್ದೇವೆ' ಎಂಬ ಭಾವನೆ ಇಟ್ಟುಕೊಂಡು ನಾವು ನೆಮ್ಮದಿಯಾಗಿರುವುದೂ ಬಹಳ ಮುಖ್ಯ. ಹಣ್ಣುಗಳು ಇಂತಹ ಭಾವನೆಯನ್ನು ಹೆಚ್ಚಿಸುತ್ತವೆ ಎನ್ನುತ್ತಾರೆ ತಜ್ಞರು.

ತಮ್ಮ ಎಷ್ಟೋ ಕಾಯಿಲೆಗಳು ತುಂಬಾ ಹಣ್ಣು ತಿನ್ನುವುದರಿಂದ ವಾಸಿಯಾಯಿತು ಎನ್ನುವವರು ಇದ್ದಾರೆ. ಈ ಕುರಿತು ಇನ್ನೂ ವೈಜ್ಞಾನಿಕ ಸಂಶೋಧನೆಗಳು ನಡೆಯುತ್ತಿವೆ.

ಹಣ್ಣು ತಿನ್ನುವವರು ಯಾವ ಪ್ರ್ರಾಣಿಗಳನ್ನೂ ಕೊಲ್ಲಬೇಕಿಲ್ಲ. ಪಾಪ, ಎಲ್ಲ ಪ್ರಾಣಿಗಳಿಗೂ ನಮ್ಮಂತೆಯೇ ಬದುಕುವ ಹಕ್ಕಿದೆ, ಅಲ್ಲವೆ? ಮಾಂಸ ಹೆಚ್ಚು ತಿನ್ನುವುದು ಹೃದಯಕ್ಕೆ ಒಳ್ಳೆಯಲ್ಲ ಎನ್ನುತ್ತಾರೆ ವಿಜ್ಞಾನಿಗಳು. ಹಣ್ಣು ಅಪಾಯವಿಲ್ಲದ ಅಹಿಂಸಾ ಆಹಾರ. ಸಾತ್ವಿಕ ಆಹಾರ. ಅದು ದೇವರಿಗೂ ಇಷ್ಟ!

ಹಣ್ಣುಗಳು ದುಬಾರಿ, ನಮ್ಮ ಮಕ್ಕಳಿಗೆ ಕೊಡಿಸುವುದು ಕಷ್ಟ ಎಂಬುದು ಹಲವಾರು ತಾಯಿತಂದೆಯರ ಭಾವನೆ. ಆದರೆ ಅಂತಹ ಅನೇಕರು ತಮ್ಮ ಮಕ್ಕಳಿಗೆ ಕೊಡಿಸುವ `ಕುರ್ ಕುರೇ', `ಮಹಾ ಮಂಚ್', `ಡೈರಿ ಮಿಲ್ಕ್ ಚಾಕೊಲೇಟ್', `ಪೆಪ್ಸಿ, ಕೋಕ್' ಗಳ ಬೆಲೆ ಹಣ್ಣುಗಳಿಗಿಂತಲೂ ದುಬಾರಿ! ಒಂದು ಬಾಳೆಹಣ್ಣಿನ ಬೆಲೆ ಈಗಲೂ ಬರೀ ಎರಡೇ ರೂಪಾಯಿ!!

ಹಣ್ಣುಗಳಲ್ಲಿ ವಿಟಮಿನ್ಗಳು, ಖನಿಜಾಂಶಗಳು ಅಪಾರವಾಗಿವೆ. ಅವು `ಕೆಮಿಕಲ್' ಆಹಾರದಂತಲ್ಲ. ಅವೆಷ್ಟು `ಫ್ರೆಶ್', ಎಷ್ಟೊಂದು ರುಚಿ! ಸಿಹಿ ಸಿಹಿ, ಹುಳಿ ಸಿಹಿ..ವ್ಹಾಹ್!!

ಇತಿಹಾಸ ಬೋರು ಎನ್ನುತ್ತೀರಾ?

ಇತಿಹಾಸ ಬೋರಲ್ಲ. ಅದು ಬಹುಮುಖ್ಯವಾದ ವಿಷಯ. ಏಕೆ ಗೊತ್ತೆ?

ಇಷ್ಟಕ್ಕೂ ಇತಿಹಾಸ ಎಂದರೇನು? ಸುಲಭವಾಗಿ ಹೇಳುವುದಾದರೆ ಇತಿಹಾಸ ನಮ್ಮ ಹಿಂದಿನ ಕಾಲದ ಬಗೆಗಿನ ಅರಿವು. ನಮ್ಮ ಹಿಂದಿನವರ ವಿಷಯಗಳನ್ನು ತಿಳಿದುಕೊಳ್ಳುವುದು. ಹಿಂದಿನ ಜನರ ಜೀವನ, ಹಿಂದೆ ನಡೆದ ಘಟನೆಗಳು, ಯುದ್ಧಗಳು, ಹಿಂದೆ ಇದ್ದ ಸಕರ್ಾರಗಳು, ರಾಜರುಗಳು - ಹೀಗೆ ಹಲವು ಸಂಗತಿಗಳನ್ನು ಕುರಿತು ಅಧ್ಯಯನ ಮಾಡುವುದು.

ಹಿಂದಿನ ರಾಜರು, ರಾಜಕೀಯ, ಆಥರ್ಿಕ, ಮಿಲಿಟರಿ ಕಾಯರ್ಾಚರಣೆಗಳು ಹೇಗೆ ಇತಿಹಾಸವೋ ಹಾಗೆಯೇ ಹಿಂದಿನ ಸಾಮಾನ್ಯ ಜನರ ಜೀವನ ವಿಧಾನವನ್ನು ಕುರಿತ ವಿವರಗಳೂ ಸಹ ಇತಿಹಾಸ. ಅವರ ನಂಬಿಕೆ, ಆಚಾರ, ವಿಚಾರ, ಧರ್ಮ, ನಡವಳಿಕೆ - ಇವೆಲ್ಲವೂ ಇತಿಹಾಸದ ಅಧ್ಯಯನ ವಸ್ತುಗಳೇ.

ನಮ್ಮ ಇಂದಿನ ಜೀವನಕ್ಕೂ ಇತಿಹಾಸಕ್ಕೂ ಏನು ಸಂಬಂಧ? ನಾವೇಕೆ ಇತಿಹಾಸ ತಿಳಿದುಕೊಳ್ಳಬೇಕು? ಏಕೆಂದರೆ ಇತಿಹಾಸ ನಮ್ಮ ಇಂದಿನ ಜೀವನದ ಮೇಲೆ ಪರಿಣಾಮ ಬೀರುತ್ತದೆ. ನಾವಿಂದು ಬದುಕುತ್ತಿರುವ ರೀತಿಗೂ ನಮ್ಮ ಪರಿಸ್ಥಿತಿಗೂ ಇತಿಹಾಸವೇ ಕಾರಣ.

ಈಗ ನೋಡಿ. ದಶಕಗಳ, ಶತಮಾನಗಳ ಅಥವಾ ಸಹಸ್ರಾರು ವರ್ಷಗಳ ಹಿಂದೆ ತೆಗೆದುಕೊಳ್ಳುವ ಯಾವುದೋ ಒಂದು ನಿರ್ಣಯದ ಫಲವಾಗಿ ನಮ್ಮ ಜೀವನದ ಸ್ವರೂಪ ಇರುತ್ತದೆ. ಉದಾಹರಣೆಗೆ ಮಹಾವೀರನ ಅಹಿಂಸೆ ಅವನ ಅನುಯಾಯಿಗಳ ಮೇಲೆ ಹೇಗೆ ಪರಿಣಾಮ ಬೀರಿದೆ ನೋಡಿ. ಇಂದು ಕೋಟ್ಯಂತರ ಜೈನರು ಶುದ್ಧ ಸಸ್ಯಾಹಾರಿ ವಿಶಿಷ್ಟ ಆಹಾರ ಪದ್ಧತಿ ಅನುಸರಿಸುತ್ತಾರೆ. ಇನ್ನೊಂದು ಉದಾಹರಣೆ. ಯಾರೋ ಎಂದೋ ಭಾರತಕ್ಕೆ ಕಾಫಿ ಬೀಜ ತಂದರು. ಇಂದು ದೇಶದ ಕೋಟ್ಯಂತರ ಜನರು ಪ್ರತಿದಿನ ಕಾಫಿ ಕುಡಿಯುತ್ತಿದ್ದಾರೆ. ಇನ್ನೂ ಒಂದು ಉದಾಹರಣೆ. ಎಂದೋ ಯಾರೋ ಪ್ರವಾದಿಗಳು ಹಿಂಸೆಯನ್ನು ಬೋಧಿಸಿದರು ಎಂದುಕೊಳ್ಳಿ. ಅವರ ಅನುಯಾಯಿಗಳು ಸಾವಿರಾರು ವರ್ಷಗಳು ಕಳೆದರೂ ಹಿಂಸೆಯನ್ನೇ ಮುಂದುವರಿಸುತ್ತಾರೆ. ಭಯೋತ್ಪಾದಕರಾಗುತ್ತಾರೆ. ಎಲ್ಲರಿಗೂ ತೊಂದರೆಯಾಗುತ್ತದೆ.

ಇತಿಹಾಸವನ್ನು ಸರಿಯಾಗಿ ಅರಿಯುವುದರಿಂದ, ಪ್ರಾಮಾಣಿಕವಾಗಿ ಸಂಶೋಧನೆ ಮಾಡುವುದರಿಂದ, ಹಿಂದಿನಿಂದ ಈವರೆಗೆ ಜನಜೀವನ, ಪರಿಸರ, ಪ್ರಾಣಿಜೀವನ ಹೇಗೆ ನಡೆದುಬಂದಿದೆ ಎನ್ನುವುದು ತಿಳಿಯುತ್ತದೆ. ನಮ್ಮ ಈಗಿನ ಸ್ಥಿತಿ ಹೆಮ್ಮೆ ಪಡುವಂತಹ ಸಂಗತಿಯೋ? ಅಲ್ಲವೋ? ಎಂಬುದು ತಿಳಿಯುತ್ತದೆ. ನಮ್ಮದು ಸುಧಾರಣೆ ಹೊಂದಿರುವ ಜೀವನವೋ ಅಲ್ಲವೋ ಎಂಬುದೂ ತಿಳಿಯುತ್ತದೆ.

ಅಲ್ಲದೇ ಇತಿಹಾಸ ಕೆದಕುವುದು ಪತ್ತೇದಾರಿ (ಡಿಟೆಕ್ಟಿವ್) ಪುಸ್ತಕ ಓದಿದಂತೆ ರೋಮಾಂಚಕ ಅನುಭವ! ಥ್ರಿಲ್!!

ನಮ್ಮ ಗತಕಾಲದ ಬಗ್ಗೆ ಹಿಂದಿನ ತಲೆಮಾರುಗಳಿಂದ ಬಂದಿರುವ  ಬಾಯಿಮಾತಿನ ದಾಖಲೆಗಳಿವೆ. ಬರಹ ರೂಪದ ದಾಖಲೆಗಳಿವೆ. ಭೂಗರ್ಭದಲ್ಲೂ ಅನೇಕ ದಾಖಲೆಗಳು ಸಿಗುತ್ತವೆ. ವಿಜ್ಞಾನದ ನೆರವಿನಿಂದಲೂ ಅನೇಕ ರೀತಿಯ ದಾಖಲೆಗಳನ್ನು ಅರಿಯಬಹುದು. ಸಿಕ್ಕ ದಾಖಲೆಗಳನ್ನು ಪರಿಶೀಲಿಸಬಹುದು. ಇವನ್ನೆಲ್ಲ ನಮಗಾಗಿ ದಾಲಿಸುವುದು ಇತಿಹಾಸಕಾರರ ಕೆಲಸ. ಆದರೆ ಅವರು ಪ್ರಾಮಾಣಿಕರಾಗಿರಬೇಕು. ಈವರೆಗೆ ತಿಳಿದಿರುವ ವಿಷಯಗಳನ್ನು ಸರಿಯಾಗಿ ವ್ಯಾಖ್ಯಾನಿಸಬೇಕು. ಸುಳ್ಳುಗಳನ್ನು ಹರಡುವ ಕುಚೇಷ್ಟೆ ಮಾಡಬಾರದು. ಅವರಿಗೆ ಯಾವುದೇ ಪಕ್ಷಪಾತ ಇರಬಾರದು. ಹೊಸ ಸತ್ಯಗಳು ತಿಳಿದಾಗ ಹಳೆಯ ಸಂಗತಿಗಳನ್ನು ಬದಲಿಸಿ ಹೊಸ ವಿಷಯ ತಿಳಿಸಬೇಕು.

1000 ವರ್ಷ ಬದುಕಲು ಸಾಧ್ಯವೆ?


ನೂರು ವರ್ಷ ಬದುಕುವ ಆಸೆ ಎಲ್ಲರಿಗೂ ಇರುತ್ತೆ. ಒಳ್ಳೆಯ ಶರೀರ ಪ್ರಕೃತಿ, ಒಳ್ಳೆಯ ನೈಸಗರ್ಿಕ ಜೀವನ ವಿಧಾನ, ಉತ್ತಮ ಆಹಾರ-ವಿಹಾರ, ಸಮಾಧಾನಕರ ಆರೋಗ್ಯ ಇರುವವರು ಯಾವುದೇ ದುರಂತಗಳಿಗೆ ತುತ್ತಾಗದೇ ಇದ್ದರೆ ನೂರು ವರ್ಷ ಬದುಕಬಹುದು.

ಆದರೆ ಸಾವಿರ ವರ್ಷ ಬದುಕಬಹುದೆ? ಅಷ್ಟು ವರ್ಷಗಳ ಕಾಲ ಇರುವ ಮರಗಳೇನೋ ಇವೆ. ಮನುಷ್ಯರು ಏನಾದರೂ  ಪ್ರಯತ್ನ ಮಾಡಿ ಸಾವಿರ ವರ್ಷ ಬದುಕುವಂತೆ ಮಾಡಿಕೊಳ್ಳಲಾದೀತೆ?

ಕೇಂಬ್ರಿಜ್ ವಿಶ್ವವಿದ್ಯಾಲಯದ ಜೆನೆಟಿಕ್ ಹಾಗೂ ವೃದ್ದಾಪ್ಯ ತಜ್ಞ ಡಾ. ಔಬ್ರೆ ಡಿ ಗ್ರೇ `ಹೌದು, ಮನುಷ್ಯರು ಸಾವಿರ ವರ್ಷ ಬದುಕಬಹುದು' ಎಂದು ಸತತವಾಗಿ ವಾದಿಸುತ್ತಿದ್ದಾರೆ. 2006ರಲ್ಲಿ ಆಕ್ಸ್ಫಡರ್್ ವಿಶ್ವವಿದ್ಯಾಲಯದಲ್ಲಿ ಐದು ದಿನಗಳ ಅಂತಾರಾಷ್ಟ್ರೀಯ ಸಮ್ಮೇಳನ ನಡೆಯಿತು. `ನಾಳೆಯ ಜನರು: ಆಯುಷ್ಯವರ್ಧನೆ ಹಾಗೂ ತಾಂತ್ರಿಕ ಸವಾಲುಗಳು' - ಎಂಬುದು ಆ ಸಮ್ಮೇಳನದ ಚಚರ್ಾವಿಷಯ. ಮನುಷ್ಯರು ತಮ್ಮ ಶರೀರವನ್ನು ನವೀಕರೀಸಿಕೊಳ್ಳಬಹುದೆ? ಮರುಜೋಡಣೆ ಮಾಡಿಕೊಳ್ಳಬಹುದೆ? ಇಷ್ಟಕ್ಕೂ `ನೈಸಗರ್ಿಕ' ಎಂದರೇನು? ಇದರಲ್ಲಿ ನಾವೆಷ್ಟು ಬದಲಾವಣೆ ತರಬಹುದು? ಇತ್ಯಾದಿ ವಿಷಯಗಳ ಬಗ್ಗೆ ಚಚರ್ೆ ನಡೆಯಿತು.

ನಮ್ಮ ಭೌತಿಕ ಗಡಿಯನ್ನು ಇನ್ನಷ್ಟು ವಿಸ್ತರಿಸಿ 150 ಅಥವಾ 200 ವರ್ಷಗಳು ಬದುಕಲು ಸಾಧ್ಯ ಎಂದು ನಂಬುವವರ ಸಂಖ್ಯೆ ಈಗ ಹೆಚ್ಚಾಗುತ್ತಿದೆ. ಇಂತಹವರು ತಮ್ಮನ್ನು `ಟ್ರಾನ್ಸ್ಹ್ಯೂಮನಿಸ್ಟ್ಸ್' ಎಂದುಕೊಳ್ಳುತ್ತಾರೆ. ಮಾನವರ ಶಾರೀರಿಕ, ಬೌದ್ಧಿಕ ಸಾಮಥ್ರ್ಯವನ್ನು ಹೊಸ ತಂತ್ರಜ್ಞಾನಗಳ ಮೂಲಕ ಹೆಚ್ಚಿಸಬಹುದು ಎಂಬುದು ಅವರ ನಂಬಿಕೆ. ಈ ಕುರಿತು ಸೈಮನ್ ಯಂಗ್ ಎನ್ನುವವರು `ಡಿಸೈನರ್ ಇವಲ್ಯೂಷನ್' ಎಂಬ ಪುಸ್ತಕ ಪ್ರಕಟಿಸಿದ್ದಾರೆ.

ಕೆಲವು ಜೆನೆಟಿಕ್ ತಂತ್ರಜ್ಞಾನದ ಸಾಧನೆಗಳಿಂದಾಗಿ ಮುಂಬರುವ ವರ್ಷಗಳಲ್ಲಿ ಸಾವಿರ ವರ್ಷ ಬದುಕುವಂತೆ ಮಾಡಬಹುದು ಎಂದು ಔಬ್ರೆ ವಾದಿಸುತ್ತಾರೆ. ಜನರಿಗೆ ರೋಗವೇ ಬರದಂತೆ ನೋಡಿಕೊಳ್ಳುವುದು, ಯಾವ ರೋಗ ಬಂದರೂ `ಠಣ್' ಅಂತ ವಾಸಿಮಾಡುವುದು, ಮುಂದೆ ಎಂದೋ ಒಂದು ದಿನ ಸಾಧ್ಯವಾಗುತ್ತದೆ; ಅದರ ಜೊತೆಗೆ ಶರೀರದ ತಾರುಣ್ಯ ಉಳಿಸುವ ತಂತ್ರಜ್ಞಾನವೂ ಅಭಿವೃದ್ಧಿಯಾದರೆ ಸಾವಿರ ವರ್ಷ ಸೊಗಸಾಗಿ ಬದುಕಬಹುದು ಎಂಬುದು ಅವರ ನಂಬಿಕೆ.

ಔಬ್ರೇ ಡಿ ಗ್ರೇ ದುಡ್ಡಿಗಾಗಿ ಈ ರೀತಿ ವಾದ ಮಾಡುತ್ತಿದ್ದಾರೆ ಎಂದೂ ಯಾರೂ ಆರೋಪಿಸುವುದಿಲ್ಲ. ಆದರೆ ಅವರ ನಂಬಿಕೆಯನ್ನು ಎಲ್ಲರೂ ಒಪ್ಪಿಲ್ಲ. `ಈ ಕನಸಿಗೂ ಮಿತಿ ಇರಬೇಕು. ಈತ ಒಂದು ರೀತಿ ವಿಚಿತ್ರ ವ್ಯಕ್ತಿ. ಜನರ ಆಯುಷ್ಯ ಪ್ರಮಾಣ ಒಂದಿಷ್ಟು ಹೆಚ್ಚಾಗಬಹುದು. ಹೊಸ ಸಂಶೋಧನೆೆಗಳ ಫಲವಾಗಿ ನೂರು ವರ್ಷ ಬದುಕುವವರ ಸಂಖ್ಯೆ ಹೆಚ್ಚಬಹುದು. ಅಥವಾ ಅತಿದೀಘರ್ಾಯುಗಳು 120-150 ವರ್ಷ ಬದುಕಬಹುದು ಅಷ್ಟೇ' ಎನ್ನುವ ವಿಜ್ಞಾನಿಗಳೇ ಹೆಚ್ಚು.

ಅದೇನೇ ಇರಲಿ. ಜನರು ಸಾವಿರ ವರ್ಷ ಬದುಕಿ ಮಾಡುವುದೇನು? ಎಲ್ಲರೂ ಸಾವಿರ ವರ್ಷ ಬದುಕುವಂತಾಯಿತು ಎಂದುಕೊಳ್ಳೋಣ. ಆಗ ಎಷ್ಟು ವರ್ಷಗಳ ಕಾಲ `ಬಾಲ್ಯಾವಸ್ಥೆ' ಇರುತ್ತದೆ? ಯೌವನದ ಅವಧಿ ಎಷ್ಟು? ಯಾವ ವಯಸ್ಸಿನವರನ್ನು `ಮುದುಕರು' ಎನ್ನಬಹುದು? - ಈ ಪ್ರಶ್ನೆಗಳಿಗೆ ಯಾರಲ್ಲಿಯೂ ಉತ್ತರವಿಲ್ಲ!

ಇನ್ನೂ ಕೆಲವು ಗಂಭೀರ ಪ್ರಶ್ನೆಗಳೂ ಏಳುತ್ತವೆ. ಪ್ರತಿ ದಂಪತಿಗಳೂ ಸುಮಾರು 300-400 ವರ್ಷಗಳ ಕಾಲ 100-150 ಮಕ್ಕಳನ್ನು ಹಡೆದರೆ ಗತಿ ಏನು? ಸಾವಿರ ವರ್ಷ ಬದುಕಿದ ಮಾತ್ರಕ್ಕೆ ಅವರ ಆಥರ್ಿಕ ಪರಿಸ್ಥಿತಿ ಏನೂ ಬದಲಾಗುವುದಿಲ್ಲ ಅಲ್ಲವೆ?

ಸಂಶೋಧನೆ ಯಶಸ್ವಿಯಾದ ಮೊದಲ ಒಂದು ಸಾವಿರ ವರ್ಷಗಳಲ್ಲಿ ಯಾರೂ ಸಾಯದಿದ್ದರೆ ಭೂಮಿಯ ಒಟ್ಟು ಜನಸಂಖ್ಯೆ ಎಷ್ಟಾಗುತ್ತದೆ? ಅಷ್ಟೊಂದು ಜನರಿಗೆ ಆಹಾರ, ಬಟ್ಟೆ, ಮನೆಗಳನ್ನು ಒದಗಿಸಲು ಸಾಧ್ಯವಾದೀತೆ? ಉದ್ಯೋಗ ಎಲ್ಲಿಂದ ತಂದು ಕೊಡುವುದು? ಸಂಬಳ-ಭತ್ಯೆ ಒದಗಿಸುವುದು, ಪೆನ್ಷನ್ ನೀಡುವುದು ಹೇಗೆ? ದೇಶದ ಹಾಗೂ ಜಗತ್ತಿನ ಹಣಕಾಸು ವ್ಯವಹಾರಗಳ ಕಥೆ ಏನು?

ಆಮೇಲೆ ನಮ್ಮ ರಾಜಕಾರಣಿಗಳು ಈಗಿನ ಪಂಚವಾರ್ಷಿಕ ಯೋಜನೆಗಳಿಗೆ ಬದಲಾಗಿ `ಶತವಾರ್ಷಿಕ ಯೋಜನೆಗಳನ್ನು' ಹಾಕಲು ಶುರುಮಾಡಿಕೊಳ್ಳುತ್ತಾರಷ್ಟೆ! ಅವರ ಸಂಸದೀಯ ಸದಸ್ಯತ್ವದ ಅವಧಿಯೂ ಐದರಿಂದ ಐವತ್ತು ವರ್ಷಗಳಿಗೆ ಏರಿಕೆಯಾಗಿಬಿಡುತ್ತದೆ!! 

ಒಟ್ಟಿನಲ್ಲಿ ನಾವು ಹೇಗೆ ಒಳ್ಳೆಯ ರೀತಿ ಬದುಕುತ್ತೇವೆ ಎನ್ನುವುದೇ ಮುಖ್ಯ, ಅಲ್ಲವೆ?

ಪ್ರಾಚೀನ ಭಾರತದಲ್ಲಿ ಜನಜೀವನ ಹೇಗಿತ್ತು?


ಇಂದು ನಾವು ಟಿವಿ ನೋಡುತ್ತೇವೆ. ಕಂಪ್ಯೂಟರ್ ಬಳಸುತ್ತೇವೆ. ಇಂಟರ್ನೆಟ್ ಬಂದ ಮೇಲಂತೂ ಬಹಳ ಅನುಕೂಲವಾಗಿದೆ. ಆದರೆ ಪ್ರಾಚೀನ (ಬಹಳ ಹಿಂದಿನ) ಕಾಲದ ಭಾರತ ಹೇಗಿತ್ತು? ಆಗಿನ ಜನರು ಹೇಗಿದ್ದರು? ಅವರು ಜೀವನಕ್ರಮ ಹೇಗಿತ್ತು? ಅವರು ಯಾವ ರೀತಿಯ ಬಟ್ಟೆ ಹಾಕಿಕೊಳ್ಳುತ್ತಿದ್ದರು? ಯಾವ ತಿನಿಸುಗಳನ್ನು ತಿನ್ನುತ್ತಿದ್ದರು? ಆಗಿನ ಮಕ್ಕಳು ಆಟಿಕೆಗಳನ್ನು ಇಟ್ಟುಕೊಂಡು ಆಡುತ್ತಿದ್ದರೆ? ಶಾಲೆಗೆ ಹೋಗುತ್ತಿದ್ದರೆ? `ಹೋಮ್ ವಕರ್್' ಮಾಡುತ್ತಿದ್ದರೆ?

ನಿಮಗೆ ಆಶ್ಚರ್ಯವಾಗಬಹುದು. ಸಾವಿರಾರು ವರ್ಷಗಳ ಹಿಂದೆಯೂ  ಭಾರತದಲ್ಲಿ ಜನಜೀವನ ಸರಿಸುಮಾರು ಈಗಿರುವಂತೆಯೇ ಇತ್ತು! ಟಿವಿ, ಇಂಟರ್ನೆಟ್, ಮೋಟಾರ್ ಕಾರ್ ಮುಂತಾದ ಈಗಿನ ಅನೇಕ ತಾಂತ್ರಿಕ ಸಾಧನಗಳು ಇಲ್ಲದಿದ್ದರೂ ಆಗಿನ ಜನರೂ ವೈವಿಧ್ಯಮಯ ಸಾಧನಗಳನ್ನು ಬಳಸುತ್ತಿದ್ದರು. ಆನಂದವಾಗಿ ಜೀವನದ ಸಂತೋಷ ಅನುಭವಿಸುತ್ತಿದ್ದರು.

ಕ್ರಿ.ಪೂ. 3500 ವರ್ಷಗಳ ಹಿಂದಿನ ಸಿಂಧೂ-ಸರಸ್ವತಿ ನಾಗರಿಕತೆಯು ವೈದಿಕ ನಾಗರಿಕತೆ ಎಂಬುದು ಈಗ ವೈಜ್ಞಾನಿಕವಾಗಿ ಸಾಬೀತಾಗಿದೆ. ಐದಾರು ಸಾವಿರ ವರ್ಷಗಳ ಹಿಂದೆ ಈ ಹಿಂದೂಗಳು ದೊಡ್ಡ ನಗರಗಳನ್ನು ನಿಮರ್ಿಸಿದ್ದರು. ವಿಶಾಲವಾದ ನೇರವಾದ ರಸ್ತೆಗಳನ್ನು ನಿಮರ್ಿಸಿದ್ದರು. ಇಟ್ಟಿಗೆಗಳಿಂದ ಸುಂದರವಾದ, ವಿಶಾಲವಾದ ಮನೆಗಳನ್ನು ಕಟ್ಟಿಕೊಂಡಿದ್ದರು. ಪ್ರತಿ ಮನೆಗೂ ಖಾಸಗಿ ಸ್ನಾನಗೃಹ, ಶೌಚಾಲಯಗಳಿದ್ದವು! ಸಿಂಧೂ ಕಣಿವೆಯ ಮಕ್ಕಳು ಆಟಿಕೆಗಳೊಂದಿಗೆ ಆಡುತ್ತಿದ್ದರು. ಮಹಿಳೆಯರು ಮೇಕಪ್, `ಲಿಪ್ಸ್ಟಿಕ್' (ಈಗಿನ ರಾಸಾಯನಿಕ ಲಿಪ್ಸ್ಟಿಕ್ಕಲ್ಲ) ಸಹ ಬಳಸುತ್ತಿದ್ದರು!!

ಇವೆಲ್ಲ ನಮಗೆ ಹೇಗೆ ಗೊತ್ತಾಯಿತು? 1922ರಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಹರಪ್ಪ ಎಂಬ ಕುತೂಹಲಕಾರಿ ಸ್ಥಳದಲ್ಲಿ ಪ್ರಾಚೀನ ನಗರದ ಅವಶೇಷಗಳನ್ನು ಪತೆಹಚ್ಚಿದರು! ಈಗ ಈ ಪ್ರದೇಶ ಪಾಕಿಸ್ತಾನಕ್ಕೆ ಸೇರುತ್ತದೆ. ಹರಪ್ಪದಿಂದ 700 ಕಿ.ಮೀ. ದೂರದಲ್ಲಿ ಮಹೆಂಜೊ-ದಾರೊ ಎಂಬ ಸ್ಥಳ ಇದೆ. ಅಲ್ಲಿಯೂ ಪ್ರಾಚೀನ ನಗರದ ಅವಶೇಷಗಳನ್ನು ಅಗೆದು ಹೊರಗೆ ಕಾಣಿಸಿದರು. ಗುಜರಾತಿನ ಧೋಲವೀರದಲ್ಲೂ ಪ್ರಾಚೀನ ನಗರ ಪತ್ತೆಯಾಯಿತು. ಈ ನಾಗರಿಕತೆಯನ್ನು `ಹರಪ್ಪ ನಾಗರಿಕತೆ', `ಸಿಂಧೂ ಕಣಿವೆ ನಾಗರಿಕತೆ' ಎಂದು ಕರೆದರು.

ಈ ಪ್ರದೇಶದ ಜನರು ಬರೀ ಸಿಂಧೂ ನದಿಯನ್ನು ಮಾತ್ರ ಆಶ್ರಯಿಸಿರಲಿಲ್ಲ, ಅತಿ ವಿಶಾಲವಾದ ಸರಸ್ವತೀ ನದಿ ಅವರ ಜೀವನಾಡಿಯಾಗಿತ್ತು ಎಂಬ ಅಂಶ ಈಚೆಗೆ ಸಾಬೀತಾಗಿದೆ. ಉಪಗ್ರಹಗಳಿಂದ ತೆಗೆದ ಚಿತ್ರಗಳು ವೇದಗಳಲ್ಲಿ ಹೇಳಿರುವ ಸರಸ್ವತಿ ನದಿಯ ಪಾತ್ರವನ್ನು ಗುರುತಿಸಿವೆ. ಈಗ ಹರಪ್ಪ ನಾಗರಿಕತೆಯನ್ನು `ಸಿಂಧೂ-ಸರಸ್ವತಿ ನಾಗರಿಕತೆ' ಎಂದು ಸಕಾರಣವಾಗಿ ಕರೆಯಲಾಗುತ್ತಿದೆ.

ಇಂದು ನಿಮ್ಮ ಶರೀರವನ್ನು ಎಷ್ಟು `ಕೆಫಿನ್' ಸೇರಿತು?


`ಕೆಫಿನ್' ಜಗತ್ತಿನ ಅತಿ `ಜನಪ್ರಿಯ' ಔಷಧಿ. ಅದನ್ನು ತಲೆನೋವು ಮೊದಲಾದ ತೊಂದರೆಗಳಿಗೆ ಪರಿಹಾರವಾಗಿ ಮಾತ್ರೆಗಳಲ್ಲಿ ಬಳಸುತ್ತಾರೆ. ಔಷಧಿಗಳ ತಯಾರಿಕೆಯಲ್ಲಿ ಅಲ್ಪ ಪ್ರಮಾಣದಲ್ಲಿ ಬಳಸಲ್ಪಡುವ ಈ ವಸ್ತುವನ್ನು ನಾವು ಕಾಫಿ, ಟೀ, ಚಾಕೊಲೇಟ್ ಮುಂತಾದ ಆಹಾರಗಳ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ಹೊಟ್ಟೆಗೆ ತೆಗೆದುಕೊಳ್ಳುತ್ತೇವೆ.

ಹೌದು ಕೆಫಿನ್ ಕಾಫಿ, ಟೀ, ಕೋಲಾ, ಕೋಕೊಗಳಲ್ಲೆಲ್ಲ ಇರುತ್ತದೆ. ಅದು ಸುಮಾರು 60 ಜಾತಿಯ ಸಸ್ಯಗಳಲ್ಲಿ ಕಂಡುಬರುತ್ತದೆ. ಈ ಸಸ್ಯಗಳಿಗೆ ಕೀಟಗಳು ಮುತ್ತದಂತೆ ನೈಸಗರ್ಿಕ ಕೀಟನಾಶಕದ ರೀತಿ ಕೆಫಿನ್ ಕೆಲಸಮಾಡುತ್ತದೆ!

ಶುದ್ಧ ಕೆಫಿನ್, ಕ್ಸಾಂಥೈನ್ ರಾಸಾಯನಿಕ ಸಮೂಹಕ್ಕೆ ಸೇರುವ ಪದಾರ್ಥ. ಅದಕ್ಕೆ ವಾಸನೆ ಇರುವುದಿಲ್ಲ. ಅದರ ರುಚಿ ಕಹಿ.

ವಿಷವನ್ನು ನಾವು ಆಡುಭಾಷೆಯಲ್ಲಿ ಸಾಮಾನ್ಯವಾಗಿ `ಕಹಿ' ಎಂದೇ ಹೇಳುತ್ತೇವೆ ಅಲ್ಲವೆ? ನಿಮಗೆ ಗೊತ್ತಿರಲಿ, ಹೆಚ್ಚು ಪ್ರಮಾಣದಲ್ಲಿ ಕೆಫಿನ್ ಸೇವಿಸುವುದೂ ಸಹ ವಿಷವನ್ನೇ ಸೇವಿಸಿದಂತೆ. ವಿಜ್ಞಾನಿಗಳ ಪ್ರಕಾರ, 10 ಗ್ರಾಂ ಕೆಫಿನ್ ಒಬ್ಬ ಮನುಷ್ಯನನ್ನು ಸಾಯಿಸಲು ಸಾಕು. ಅಂದರೆ 80-100 ಕಪ್ ಕಾಫಿಯಲ್ಲಿ ಒಬ್ಬ ಮನುಷ್ಯನನ್ನು ಕೊಲ್ಲುವಷ್ಟು ಕೆಫಿನ್ ಇರುತ್ತದೆ! ಆದರೆ ಒಂದೇ ಬಾರಿಗೆ ಅಷ್ಟು ಕಪ್ ಕಾಫಿ ಕುಡಿಯುವುದು ಸುಲಭವಲ್ಲ.

ಜನರು ಏಕೆ ಕೆಫಿನ್ ಸೇವಿಸುತ್ತ್ತಾರೆ? ಏಕೆಂದರೆ ಅದು ಅವರ ಕೇಂದ್ರ ನರಮಂಡಲವನ್ನು ಉದ್ರೇಕಿಸುತ್ತದೆ. ಅದರಿಂದ ಸಣ್ಣ ಪ್ರಮಾಣದ ಸುಸ್ತು, ಬೇಸರ ಮಾಯವಾಗುತ್ತವೆ. ಶರೀರ ಚುರುಕಾಗುತ್ತದೆ. ಚಟುವಟಿಕೆ ಹೆಚ್ಚುತ್ತದೆ. ಅಲ್ಲದೇ ಕೆಫಿನ್ ಒಂದು ಉತ್ತೇಜನಕಾರಿ ಪದಾರ್ಥ. ಹೀಗಾಗಿ ಅದನ್ನು ಪದೇಪದೇ ಸೇವಿಸಬೇಕೆಂಬ ಗೀಳು ಹೆಚ್ಚಾಗುತ್ತದೆ. ದೊಡ್ಡವರು ಸದಾ ಕಾಫಿ, ಟೀ ಬೇಕೇಬೇಕು ಎನ್ನುತ್ತಾರೆ. ಮಕ್ಕಳು `ಚಾಕೊಲೇಟ್ ಬೇಕೂ....' ಎಂದು ಸದಾ ಹಠಹಿಡಿಯುತ್ತವೆ. ಅವುಗಳನ್ನು ಮಾರುವವರಿಗೆ ಒಳ್ಳೆಯ ಲಾಭ ಬರುತ್ತದೆ.

ಕೆಫಿನ್ ಹೆಚ್ಚಾಗಿ ಶರೀರಕ್ಕ್ಕೆ ಸೇರುತ್ತಿದ್ದಂತೆ ನಿದ್ರಾಹೀನತೆ, ತಲೆನೋವು ಕಾಡಲಾರಂಭಿಸುತ್ತವೆ. ರಕ್ತದೊತ್ತಡ ಹೆಚ್ಚಾಗುತ್ತದೆ. ಕ್ರಮೇಣ ಹೃದಯ ಸಂಬಂಧಿ ಸಮಸ್ಯೆಗಳು ತಲೆದೋರುತ್ತವೆ. ಪದೇಪದೇ ಕೆಫಿನ್ ಸೇವಿಸುವವರು ಸಕಾಲದಲ್ಲಿ ಸೇವಿಸದಿದ್ದರೂ ತಲೆನೋವು, ನಿದ್ರಾಹೀನತೆ, ಮೈಕೈನೋವು ಕಾಡುತ್ತವೆ!

ಕೆಫಿನ್ ಅನೇಕ ಪೇಯ, ಆಹಾರ ಹಾಗೂ ಔಷಧಿಗಳಲ್ಲಿದೆ. 150 ಮಿ. ಲೀ. ಕಾಫಿಯಲ್ಲಿ 60-150 ಮಿ. ಗ್ರಾಂ.; ಅಷ್ಟೇ ಟೀಯಲ್ಲಿ 40-80 ಮಿ. ಗ್ರಾಂ.; 250 ಮಿ. ಲೀ. ಜೋಲ್ಟ್ ಕೋಲಾದಲ್ಲಿ 100 ಮಿ. ಗ್ರಾಂ.; ಅಷ್ಟೇ ಡಯಟ್ ಕೋಕಾ ಕೋಲಾದಲ್ಲಿ 45 ಮಿ .ಗ್ರಾಂ.; ಸಾಧಾರಣ ಕೋಕಾ ಕೋಲಾದಲ್ಲಿ 64 ಮಿ. ಗ್ರಾಂ.; ಪೆಪ್ಸಿ ಕೋಲಾದಲ್ಲಿ 43 ಮಿ. ಗ್ರಾಂ.; 50 ಗ್ರಾಂ ಚಾಕೊಲೇಟ್ ಬಾರ್ನಲ್ಲಿ 3-63 ಮಿ. ಗ್ರಾಂ.; ನೆಸ್ಲೆ ಕ್ರಂಚ್ ಬಾರ್ನಲ್ಲಿ 10 ಮಿ. ಗ್ರಾಂ.; ಮಿಲ್ಕ್ ಚಾಕೊಲೇಟ್ನಲ್ಲಿ 15 ಮಿ. ಗ್ರಾಂ.; ಕಿಟ್ಕ್ಯಾಟ್ ಬಾರ್ನಲ್ಲಿ 5 ಮಿ. ಗ್ರಾಂ. ಕೆಫಿನ್ ಇದೆ.

ಮೇಲಿನ ಪಟ್ಟಿ ಉಪಯೋಗಿಸಿ ಪ್ರತಿದಿನವೂ ನಿಮ್ಮ ಹೊಟ್ಟೆಯನ್ನು ಎಷ್ಟು ಪ್ರಮಾಣದ ಕೆಫಿನ್ ಸೇರುತ್ತದೆ ಎಂಬುದನ್ನು ಲೆಕ್ಕಹಾಕಬಹುದು.

ಸಾಧ್ಯವಾದಷ್ಟೂ ಕೆಫಿನ್ ಸೇವನೆ ಕಡಿಮೆ ಮಾಡಿದರೆ ಆರೋಗ್ಯ ಚೆನ್ನಾಗಿರುತ್ತದೆ.

Wednesday 21 July 2010

ನೀವು `ಫಿಟ್' ಆಗಿರಲು ಹೀಗೆಮಾಡಿ ಸಾಕು


ಆರೋಗ್ಯ ಕಾಪಾಡಿಕೊಳ್ಳುವುದು ಎಲ್ಲ ವಯಸ್ಸಿನವರಿಗೂ ಅತ್ಯಗತ್ಯ. ಪರೀಕ್ಷೆ ಹತ್ತಿರ ಬಂದೊಡನೇ `ಅಯ್ಯೋ! ಹೊಟ್ಟೆನೋವು' ಎನ್ನುವಂತಾಗಬಾರದಲ್ಲವೆ? ಅದಕ್ಕೇನು ಮಾಡಬೇಕು? ಮೊದಲಿಗೆ ನಿಮ್ಮ ಆಹಾರ ಪೌಷ್ಟಿಕವಾಗಿರಬೇಕು. ಅದರ ಜೊತೆಗೇ ನಿಮ್ಮ ಆಟ-ಪಾಠಗಳು ಚೆನ್ನಾಗಿ ನಡೆಯಬೇಕು. ಒಂದಿಷ್ಟು ವ್ಯಾಯಾಮ ಮಾಡುವುದು ತುಂಬಾ ಒಳ್ಳೆಯದು. ಶಾಲೆಯ ಯೋಗ ಕ್ಲಾಸ್, ಫಿಸಿಕಲ್ ಎಜುಕೇಷನ್ ತಪ್ಪಿಸಿಕೊಳ್ಳಬೇಡಿ.

ಆಹಾರ, ವ್ಯಾಯಾಮಗಳಿಂದ ಬುದ್ಧಿ ಚುರುಕಾಗುತ್ತದೆ. ಓದಿದ್ದು ಸುಲಭವಾಗಿ ಅರ್ಥವಾಗುತ್ತದೆ. ಮನಸ್ಸಿಗೆ ಖುಷಿಯಾಗುತ್ತದೆ. ದೇಹಕ್ಕೆ ಲವಲವಿಕೆ ಬರುತ್ತದೆ. ಆಮೇಲೆ ನಿಮ್ಮ ಆರೋಗ್ಯ ಫಸ್ಟ್-ಕ್ಲಾಸ್! ಜೊತೆಗೆ ನೀವು ಪರೀಕ್ಷೇಲೂ ಫಸ್ಟ್-ಕ್ಲಾಸ್!

ನಿಮಗೆ ಪೌಷ್ಟಿಕ ಆಹಾರ ಒದಗಿಸುವುದು ನಿಮ್ಮ ಪೋಷಕರ ಕೆಲಸ. ಆದರೆ ಈ ಕೆಳಗೆ ಹೇಳುವ ಸಂಗತಿಗಳನ್ನು ಮರೆಯದೇ ಅನುಸರಿಸುವುದು ನಿಮ್ಮ ಕೆಲಸ.

1. ಸದಾ ಒಂದೇ ಬಗೆಯ ಊಟಮಾಡಬೇಡಿ. `ಅನ್ನ, ತಿಳಿಸಾರು ಬಿಟ್ಟರೆ ಏನೂ ತಿನ್ನುವುದೇ ಇಲ್ಲ' ಎಂದು ಅಮ್ಮ ರೇಗುವಂತೆ ಮಾಡಬೇಡಿ. ಬಗೆಬಗೆಯ ಖಾದ್ಯಗಳನ್ನು ತಿನ್ನುವುದರಿಂದ ನಿಮಗೆ ವಿವಿಧ ರುಚಿಗಳು ಲಭಿಸುವ ಜೊತೆಗೆ ವಿವಿಧ ಪೌಷ್ಟಿಕಾಂಶಗಳು ದೊರಕುತ್ತವೆ.

2. ನಿಮ್ಮ ಆಹಾರದಲ್ಲಿ ಹಣ್ಣುಗಳು, ಸೊಪ್ಪುಗಳು, ಹಸಿರು ತರಕಾರಿಗಳು ಮತ್ತು ಕಾಳುಗಳು ಧಾರಾಳವಾಗಿರಬೇಕು. ಇವುಗಳಿಂದ ನಿಮ್ಮ ರೋಗನಿರೋಧಕ ಶಕ್ತಿ ಹೆಚ್ಚುತ್ತದೆ. ಅನೇಕ ರೋಗಗಳು ನಿಮ್ಮ ಹತ್ತಿರ ಬರುವುದೇ ಇಲ್ಲ.

3. ದಿನಕ್ಕೆ ಏನಿಲ್ಲವೆಂದರೂ 8-9 ದೊಡ್ಡ ಲೋಟ ನೀರು ಕುಡಿಯಬೇಕು. ಹಾಲೂ ಅಷ್ಟೇ. ದಿನಕ್ಕೆ ಕನಿಷ್ಠ ಒಂದು (ಅಥವಾ ಎರಡು) ದೊಡ್ಡ ಲೋಟದಷ್ಟು ಹಾಲು ಕುಡಿಯಬೇಕು. `ಹಾಲು ಕುಡಿ' ಎಂದು ಅಮ್ಮ ಕರೆದರೆ `ಈಗ ಬೇಡ' ಎನ್ನಕೂಡದು.

4. ಎಷ್ಟು ತಿನ್ನುತ್ತಿದ್ದೇವೆ ಎನ್ನುವ ಅರಿವೂ ಇರಬೇಕು. ಊಟಕ್ಕೆ ಕೂತಾಗ ತಿನಿಸುಗಳು ರುಚಿಯಾಗಿವೆ ಎಂದು ಹೊಟ್ಟೆಬಾಕರ ಹಾಗೆ ತಿನ್ನಬಾರದು.

5. ರಜೆ ಸಿಕಿದಾಗಲೆಲ್ಲಾ, ಬಿಡುವು ದೊರೆತಾಗಲೆಲ್ಲಾ, ಟಿವಿ, ಡಿವಿಡಿ, ವೀಡಿಯೋ ಗೇಮ್ಸ್ ಅಂತ ಹೆಚ್ಚು ಕೂರಬಾರದು. ಹೊರಗೆ ಮೈದಾನದಲ್ಲಿ, ಸ್ನೇಹಿತರೊಡನೆ ಚೆನ್ನಾಗಿ ಆಡಬೇಕು. ಚಿತ್ರ ಬರೆಯುವುದು, ಒಳ್ಳೆಯ ಪುಸ್ತಕಗಳನ್ನು ಓದುವುದು, ಸಂಗೀತ ಕೇಳುವುದು ಮೊದಲಾದ ಹವ್ಯಾಸಗಳನ್ನು ಬೆಳೆಸಿಕೊಳ್ಳಬೇಕು. ವೇಳಾಪಟ್ಟಿ ಹಾಕಿಕೊಂಡು ಟಿವಿ, ಕಂಪ್ಯೂಟರ್ಗಳಿಗೂ ಒಂದಿಷ್ಟು ಸಮಯ ನೀಡಬೇಕು.

6. ಒಂದು ವಿಷಯ ಮರೆಯಬಾರದು. ಸದಾ ಚಟುವಟಕೆಯಿಂದ ಇರಬೇಕು. ಸದಾ `ಅಯ್ಯೋ! ಬೋರು.. ಥೂ! ಬೇಜಾರು...' ಎನ್ನುತ್ತಿರಬಾರದು.

ಅನ್ಯ ಗ್ರಹಗಳಲ್ಲಿ ಜೀವಿಗಳಿವೆಯೆ?

ಈ ಬ್ರಹ್ಮಾಂಡದಲ್ಲಿ ನಾವು ಒಂಟಿಯೆ? ಭೂಮಿಯಂತೆ ಜೀವಿಗಳನ್ನು ಹೊಂದಿರುವ ಇನ್ನೊಂದು ಗ್ರಹ ಇದೆಯೆ? ಇದ್ದರೆ ಅದನ್ನು ಪತ್ತೆಹಚ್ಚಿ ಆ ಜೀವಿಗಳನ್ನು ಮಾತನಾಡಿಸಿ...ವ್ಹಾ!!


ಬೇರೆ ಗ್ರಹಗಳಿಂದ `ಮಾನವರು' ಭೂಮಿಗೆ ಎಂದಾದರೂ ಬಂದಿದ್ದಾರೆಯೆ? ಹಾಗೆಂದು ಹೇಳಲು ಆಧಾರಗಳಿಲ್ಲ ಎನ್ನುವುದು ಬಹುತೇಕ ವಿಜ್ಞಾನಿಗಳ `ಅಧಿಕೃತ' ನಿಲುವು. ಆದರೂ ಅನ್ಯಗ್ರಹ ಜೀವಿಗಳ ಬಗ್ಗೆ ಕುತೂಹಲ ಇದ್ದೇ ಇದೆ. ವಿಜ್ಞಾನಿಗಳು ತಮ್ಮ ಅನ್ವೇಷಣೆ ಮುಂದುವರಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ನಲ್ಲಿರುವ ಕಾನರ್ೆಗಿ ಇನ್ಸ್ಟಿಟ್ಯೂಟ್ 17,129 ಗ್ರಹಗಳ ಪಟ್ಟಿ ತಯಾರಿಸಿದೆ. ಈ ಗ್ರಹಗಳಲ್ಲಿ ಯಾವುದಾರೊಂದು ರೀತಿಯ ಜೀವಿಗಳು ಇರಬಹುದಾದ ವಾತಾವರಣ, ಪರಿಸರ ಇದೆ ಎಂದು ತಿಳಿಸಿದೆ. `ಹೌದೇ, ನೋಡಿಯೇ ಬಿಡೋಣ' ಎಂದು ಪತ್ತೆಹಚ್ಚಲು ಸರ್ರೆಂದು ಹೊರಡುವ ತಂತ್ರಜ್ಞಾನ ಸದ್ಯಕ್ಕೆ ನಮ್ಮ ಬಳಿ ಇಲ್ಲ. ದೂರದರ್ಶಕ ಹಾಕಿಕೊಂಡೋ ಇತರ ವಿಧಾನ ಅನುಸರಿಸಿಕೊಂಡೋ ಒಂದೊಂದು ಗ್ರಹವನ್ನೇ ಪರೀಕ್ಷಿಸಲು ಹೊರಟರೆ ದಶಕಗಳೇ ಹಿಡಿಯುತ್ತವೆ. ಆಗಲೂ ನಿಖರ ಫಲಿತಾಂಶ ಸಿಗುತ್ತದೆಯೇ ಎಂಬುದನ್ನು ಹೇಳಲಾಗದು.

ಯಾವುದಾರೊಂದು ಗ್ರಹದಲ್ಲಿ ಜೀವಿಗಳು ವಿಕಾಸವಾಗಲು ಆ ಗ್ರಹಕ್ಕೆ ಏನಿಲ್ಲವೆಂದರೂ 300 ಕೋಟಿ ವರ್ಷಗಳಷ್ಟಾದರೂ ವಯಸ್ಸಾಗಿರಬೇಕು. ಅದು ಭೂಮಿಯಂತಹ ಗ್ರಹವಾಗಿರಬೇಕು ಎನ್ನುತ್ತಾರೆ ವಿಜ್ಞಾನಿಗಳು.

ಯಾವುದಾದರೂ ಗ್ರಹಗಳಲ್ಲಿ ನಮಗಿಂತಲೂ ಬುದ್ಧಿವಂತ ಜೀವಿಗಳಿದ್ದರೆ ಅವರು ನಮ್ಮನ್ನು ಇನ್ನೂ ಏಕೆ ಸಂಪಕರ್ಿಸಿಲ್ಲ?

`ಅವರು ನಿಗೂಢ ವಾಹನಗಳಲ್ಲಿ (ಹಾರುವ ತಟ್ಟೆಗಳು) ನಮ್ಮ ಬಳಿ ಬರುತ್ತಿದ್ದಾರೆ. ನಾವದನ್ನು ಕಂಡಿದ್ದೇವೆ' ಎಂದು ಅನೇಕರು ಹೇಳುವುದನ್ನು ನೀವು ಕೇಳಿರಬಹುದು. ಅವುಗಳಿಗೆ `ಗುರುತು ಪತ್ತೆಯಾಗದ ಹಾರುವ ವಸ್ತುಗಳು' - `ಯುಎಫ್ಒ' ಎನ್ನುತ್ತಾರೆ. ಆದರೆ `ಈ ಯುಎಫ್ಒ ಬಗ್ಗೆ ಜನರು ಮಾಡಿರುವ ವರದಿಗಳು ಖಚಿತವಲ್ಲ. ಬೆಳಕಿನ ಉಂಡೆಗಳಂತೆ ಕಾಣುವ ಯುಎಫ್ಒಗಳು ವಾಸ್ತವವಾಗಿ ಆಗಸದಲ್ಲಿ ಜರುಗುತ್ತಿರುವ ಕೆಲವು ಪರಿಸರ ವಿದ್ಯಮಾನಗಳು. ಅವನ್ನು ವಾಹನಗಳು ಎಂದು ಜನರು ಭ್ರಮಿಸಿದ್ದಾರೆ. ಕೆಲವರು ಪ್ರಚಾರದ ಆಸೆಯಿಂದಲೂ ಸುಳ್ಳು ಹೇಳುತ್ತಾರೆ' ಎನ್ನುವುದು ವಿಜ್ಞಾನಿಗಳ `ಅಧಿಕೃತ' ಅಭಿಪ್ರಾಯ. ಆದರೂ ಈ ಕುರಿತ ಅನುಮಾನಗಳು ಇನ್ನೂ ಬಗೆಹರಿದಿಲ್ಲ.

ಬ್ರಹ್ಮಾಂಡದಲ್ಲಿ ಜೀವಿಗಳಿರಬಹುದು ಎಂಬ ಆಶಾಭಾವನೆ ಮಾತ್ರ ವಿಜ್ಞಾನಿಗಳಿಗೂ ಹೋಗಿಲ್ಲ. 1960ರಲ್ಲಿ ಫ್ರಾಂಕ್ ಡೇಕ್ ಎನ್ನುವ ಖಗೋಳಜ್ಞ 85 ಅಡಿ ರೇಡಿಯೋ ಡಿಷ್ ಬಳಸಿ ಅಮೆರಿಕದ ವಜರ್ೀನಿಯಾದಲ್ಲಿರುವ ರಾಷ್ಟ್ರೀಯ ಖಗೋಳ ವೀಕ್ಷಣಾಲಯದಿಂದ ಅನ್ಯಗ್ರಹಗಳಿಂದ ಏನಾದರೂ ರೇಡಿಯೋ ಸಂದೇಶ ಬರುತ್ತಿದೆಯೇ ಎಂದು ಆಲಿಸಿದರು. ಫಲಿತಾಂಶ `ಟುಸ್' ಆಯಿತು.

ಆದರೂ `ನಮ್ಮನ್ನು ಯಾರೋ ಸಂಪಕರ್ಿಸುತ್ತಾರೆ' ಎಂಬ ನಂಬಿಕೆ ಪ್ರಬಲವಾಗಿ ಬೆಳೆಯಿತು. ಅವರು ನಮ್ಮನ್ನು ಸಂಪಕರ್ಿಸುತ್ತಿದ್ದರೂ ನಮಗದು ತಿಳಿಯುತ್ತಿಲ್ಲ ಎಂದು ವಾದಿಸುವವರೂ ಹುಟ್ಟಿಕೊಂಡರು. ಕ್ಯಾಲಿಫೋನರ್ಿಯಾದಲ್ಲಿ `ಸೇಟಿ' (ಎಸ್ಇಟಿಐ- ಬಾಹ್ಯಾಕಾಶ ಬುದ್ಧಿಜೀವಿಗಳಿಗಾಗಿ ಅನ್ವೇಷಣೆ) ಇನ್ಸ್ಟಿಟ್ಯೂಟ್ ಎಂಬ ಖಾಸಗಿ ಸಂಸ್ಥೆಯ ಸ್ಥಾಪನೆಯಾಯಿತು. ಅದೀಗ ಇಂಟರ್ನೆಟ್ ಮೂಲಕ ಸಾವಿರಾರು ಸದಸ್ಯರನ್ನು ಹೊಂದಿದ್ದು, ಅವರೆಲ್ಲ ಅನ್ಯಗ್ರಹಗಳ ರೇಡಿಯೋ ಸಂಕೇತಗಳನ್ನು ಆಲಿಸಲು ದಿನವೂ ಪ್ರಯತ್ನಿಸುತ್ತಿದ್ದಾರೆ. ಸದ್ಯಕ್ಕೆ ಅಂತಹ ಯಾವುದೇ ಸಂಕೇತ ದೊರೆತ ವರದಿಗಳು ಬಂದಿಲ್ಲ.
ಅದು ಹೋಗಲಿ, ನಾವೇ ಅನ್ಯಗ್ರಹವಾಸಿಗಳನ್ನು ಸಂಪಕರ್ಿಸಿದರೆ!?

1972ರಲ್ಲಿ ಮಾನವ ಗಂಡು-ಹೆಣ್ಣುಗಳ ಚಿತ್ರವಿರುವ ಫಲಕವನ್ನು ಪಯೋನಿಯರ್-10 ಉಪಗ್ರಹಕ್ಕೆ ಅಳವಡಿಸಿ ಹಾರಿಬಿಡಲಾಗಿದೆ. ಯಾರಾದರೂ ನೋಡಿದರೆ ನಮ್ಮನ್ನು ಕಂಡುಹಿಡಿಯಲಿ ಎಂಬುದು ಅದರ ಆಶಯ. ಇಂತಹ ಅನೇಕ ಪ್ರಯತ್ನಗಳಾಗಿವೆ. 1977ರಲ್ಲಿ ಧ್ವನಿಮುದ್ರಣವನ್ನೂ ಬಾಹ್ಯಾಕಾಶಕ್ಕೆ ರವಾನಿಸಲಾಗಿದೆ. 55 ಬಾಷೆಗಳ ಗ್ರೀಟಿಂಗ್, ಬಲ್ಗೇರಿಯಾದ ಜಾನಪದ ಗೀತೆಗಳನ್ನು ವಾಯೇಜರ್ ಉಪಗ್ರಹ ತೆಗೆದುಕೊಂಡು ಹೋಗಿದೆ.

2006ರಲ್ಲಿ `ಕಾಸ್ಮಿಕ್ ಕನೆಕ್ಷನ್' ಎನ್ನುವ ಟಿವಿ ಕಾರ್ಯಕ್ರಮವನ್ನು ಭೂಮಿಯಿಂದ 45 ಜ್ಯೋತಿರ್ವರ್ಷಗಳಷ್ಟು ದೂರವಿರುವ (ಒಂದು ಸೆಕೆಂಡಿಗೆ 3 ಲಕ್ಷ ಕಿಲೋಮೀಟರ್ ಕ್ರಮಿಸುವುದು ಬೆಳಕಿನ ವೇಗ. ಈ ವೇಗದಲ್ಲಿ 45 ವರ್ಷ ಕ್ರಮಿಸಬೇಕಾದಷ್ಟು ದೂರ!) ಎರೈ ಎನ್ನುವ ನಕ್ಷತ್ರದ ಕಡೆದೆ ತೂರಿಬಿಡಲಾಗಿದೆ.  ವೀಡಿಯೊ ಅಲ್ಲಿಗೆ 2051ರಲ್ಲಿ ತಲುಪುತ್ತದೆ. ಅಲ್ಲಿಂದ ಯಾರಾದರೂ ತಕ್ಷಣ ಬೆಳಕಿನವೇಗದಲ್ಲೇ ಉತ್ತರ ಕಳುಹಿಸಿದರೂ ಅದು ಭೂಮಿಯನ್ನು ಮುಟ್ಟಲು ಇನ್ನೂ 45 ವರ್ಷಗಳು ಬೇಕು.

ಅಲ್ಲಿಯವರೆಗೂ ಕಾದು ನೋಡೋಣ!